ಗಾಯಗೊಂಡಿದ್ದ ವ್ಯಕ್ತಿ ನೀರು ಕೇಳಿದ್ದರು, ಬಿಪಿನ್ ರಾವತ್ ಎಂದು ನಂತ್ರ ಗೊತ್ತಾಯ್ತು : ಕುನೂರ್‌ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಹಾಯಕ್ಕೆ ಬಂದ ಸ್ಥಳೀಯ

ಕುನೂರು: ಕುನೂರ್ ಸಮೀಪ ಬುಧವಾರ (ಡಿಸೆಂಬರ್‌ 8) ಸಂಭವಿಸಿದ ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಎಇಎಸ್‌) ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಟೀ ಎಸ್ಟೇಟ್ ಪ್ರದೇಶದಲ್ಲಿ ಈ ಹೆಲಿಕಾಪ್ಟರ್ ಪತನಗೊಂಡಿದ್ದು ಸ್ಥಳೀಯರು ತಮಗೆ ಏಕಾಏಕಿ ಭಾರಿ ಸದ್ದು ಕೇಳಿಸಿದೆ ಹಾಗೂ ದಟ್ಟವಾದ ಹೊಗೆ ಆವರಿಸಿದ್ದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದು, “ಮಧ್ಯಾಹ್ನದ ಸಮಯದಲ್ಲಿ ಭಾರಿ ಸದ್ದು ಕೇಳಿಸಿತು. ನಾನು ನನ್ನ ಮನೆಯಿಂದ ಹೊರಬಂದೆ. ಆಗ ಹೆಲಿಕಾಫ್ಟರ್ ಮರದ ರೆಂಬೆಗಳಿಗೆ ತಗುಲಿ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತ್ತು. ಕೆಲವರು ಚೀರುತ್ತಿದ್ದ ಸದ್ದೂ ಕೇಳಿಸುತ್ತಿತ್ತು ಎಂದು ಪ್ರತ್ಯಕ್ಷವಾಗಿ ಘಟನೆಯನ್ನು ನೋಡಿದ ಪಿ. ಚಂದಿರಕುಮಾರ್ ಹೇಳಿದ್ದಾರೆ.
ಈ ಘಟನೆ ನೋಡಿ ಗಾಬರಿಯಾದ ತಾನು ತಕ್ಷಣವೇ ನೆರೆಯ ಮನೆಯ ಶಿವಕುಮಾರ್ ಅವರನ್ನು ಕರೆದೆ, ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳದ ಬಳಿಯೇ ಇದ್ದ 8 ಮಂದಿ ಅಪಘಾತಕ್ಕೀಡಾದ ಸ್ಥಳಕ್ಕೆ ಧಾವಿಸಿದರು ಎಂದು ತಿಳಿಸಿದ್ದಾರೆ.
ದಟ್ಟ ಹೊಗೆ ಆವರಿಸಿದ್ದರಿಂದ ಹೆಚ್ಚು ಕಾಣಿಸಲಿಲ್ಲ. ಅಲ್ಲಿನ ಭೂಪ್ರದೇಶದ ಸ್ಥಿತಿಯಿಂದಾಗಿ ಘಟನೆ ನಡೆದ ಸ್ಥಳಕ್ಕೆ ತೆರಳುವುದಕ್ಕೆ ಕಷ್ಟವಾಯಿತು. ಹೆಲಿಕಾಪ್ಟರ್ ಹೊರಗೆ ಇಬ್ಬರು ವ್ಯಕ್ತಿಗಳು ಬಿದ್ದಿದ್ದನ್ನು ಕಂಡೆ, ಹೆಲಿಕಾಪ್ಟರ್ ಪತನಗೊಳ್ಳುತ್ತದೆ ಎಂಬುದನ್ನು ಅರಿತ ಅವರು ಅಲ್ಲಿಂದ ಜಿಗಿದಿದ್ದರು ಎಂದೆನಿಸುತ್ತದೆ. ಅವರ ಬಟ್ಟೆಗಳು ಸುಟ್ಟುಹೋಗಿದ್ದವು, ಅವರ ಮುಖಗಳು ಗುರುತು ಸಿಗುತ್ತಿರಲಿಲ್ಲ ಎಂದು ಶಿವಕುಮಾರ್ (45) ಎಂಬ ಮತ್ತೋರ್ವ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಅವರು ತುಂಬಾ ಆಳದಲ್ಲಿ ಬಿದ್ದಿದ್ದವರನ್ನ ಬೇಗ ಮೇಲೆ ಎತ್ತಲು ಆಗಲಿಲ್ಲ. ಪೊಲೀಸರಿಗೆ ಮಾಹಿತಿ ನೀಡಿದೆವು. ನಾವಿಬ್ಬರು ಕೆಳಗೆ ಇಳಿದು ಒಬ್ಬರನ್ನ ಮೇಲೆತ್ತಿದೆವು. ಮತ್ತೆ ಕೆಳಗೆ ಇಳಿದು ಮತ್ತೊಬ್ಬರನ್ನ ಎತ್ತಲು ಶರುಮಾಡಿದಾಗ ಅವರು ನಮ್ಮತ್ತ ತಿರುಗಿ ನೋಡಿ ನನಗೆ ನೀರು ಬೇಕು ಎಂದು ಇಂಗ್ಲಿಷ್​ನಲ್ಲಿ ಕೇಳಿದರು. ನೀರು ತರುವ ತನಕ ಸಮಯವಾಗುತ್ತೆ ಅಂತ ಬೆಡ್​ಶೀಟ್​ನಲ್ಲಿ ಸುತ್ತಿ ಅವರನ್ನ ಮೇಲೆ ಎತ್ತಿಕೊಂಡು ಹೋದೆವು. ಆಗ ಅವರು ಯಾರೆಂದು ತಿಳಿಯಲಿಲ್ಲ. ನಂತರ ಸುದ್ದಿ ನೋಡಿದಾಗಷ್ಟೇ ನಮಗೆ ಆ ಹೆಲಿಕಾಪ್ಟರಿನಲ್ಲಿ ಹಿರಿಯ ಸೇನಾಧಿಕಾರಿಗಳೂ ಇದ್ದಾರೆ ಎಂಬ ಮಾಹಿತಿ ಲಭ್ಯವಾಯಿತು ಎಂದು ಶಿವಕುಮಾರ್ ತಿಳಿಸಿದರು.
ಗಾಯಾಳುಗಳನ್ನು ಮುಖ್ಯರಸ್ತೆಗೆ ಕರೆದೊಯ್ಯಲು ಸಹಾಯ ಮಾಡಿದೆವು. ತಕ್ಷಣವೇ ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಸಿಬ್ಬಂದಿ ಆಗಮಿಸಿದರು ಎಂದು ಮಾಹಿತಿ ನೀಡಿದ್ದಾರೆ.ಅವರನ್ನ ಆಸ್ಪತ್ರೆಗೆ ಕಳುಹಿಸಿ ಮೂರು ಗಂಟೆ ನಂತರ ಒಬ್ಬ ಸೇನಾಧಿಕಾರಿ ನನ್ನ ಭುಜ ತಟ್ಟಿ ಒಂದು ಫೋಟೋ ತೋರಿಸಿದರು. ಆ ಫೋಟೋ ಬಿಪಿನ್ ರಾವತ್ ಅವರದ್ದು ಹಾಗೂ ನೀನು ರಕ್ಷಣೆ ಮಾಡಿದ್ದು ಅವರನ್ನೇ ಅಂತ ಹೇಳಿದರು. ಅಲ್ಲದೆ ಅವರು ನಮ್ಮ ದೇಶವನ್ನ ಕಾಪಾಡುವ ಸೇನಾ ಸಿಬ್ಬಂದಿ ಮುಖ್ಯಸ್ಥರು(ಸಿಡಿಎಸ್ ) ಎಂದು ತಿಳಿಸಿದರು. ಅವರು ಯಾರೆಂದು ಗೊತ್ತಾಗಿ ಅವರು ನೀರು ಕೇಳಿದಾಗ, ನೀರು ಕೊಡಲು ಆಗಲಿಲ್ಲವಲ್ಲ ಎನ್ನುವ ನೋವಉ ಈಗ ನನಗೆ ಕಾಡುತ್ತಿದೆ ಎಂದರು.
ಮತ್ತೋರ್ವ ನೀಡಿರುವ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್ ಪತನಗೊಂಡಾಗ ಸಿಲಿಂಡರ್ ದೊಡ್ಡ ಶಬ್ದ ಕೇಳಿಸಿತು. ನನ್ನ ಮನೆಯಿಂದ ಕೇವಲ 2 ನಿಮಿಷಗಳ ನಡಿಗೆಯ ದೂರದಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತ ನಡೆದ ಸ್ಥಳದಲ್ಲಿದ್ದ ಮೂರು ಮನೆಗಳಲ್ಲಿ ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement