ನವದೆಹಲಿ: ಭಾನುವಾರ ರಾಜಸ್ಥಾನದ ಜೈಪುರದಲ್ಲಿ ಕಾಂಗ್ರೆಸ್ನ ‘ಹಣದುಬ್ಬರ ತೊಲಗಿಸಿ ರ್ಯಾಲಿ’ಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಹಿಂದುತ್ವವಾದಿಗಳನ್ನು ಅಧಿಕಾರದಿಂದ ತೆಗೆದುಹಾಕಿ ಹಿಂದೂಗಳನ್ನು ಮರಳಿ ಕರೆತರುವಂತೆ ವೇದಿಕೆಯಲ್ಲಿ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಈ ಮನವಿಗೆ ಟೀಕಿಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖಂಡ ಅಸಾದುದ್ದೀನ್ ಓವೈಸಿ ಭಾರತ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಸೇರಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜಾತ್ಯತೀತತೆ ಬಗ್ಗೆ ವ್ಯಂಗ್ಯವಾಡಿದ ಓವೈಸಿ, ಹಿಂದೂಗಳನ್ನು ಅಧಿಕಾರಕ್ಕೆ ತರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆ ಎಂತಹ ಜಾತ್ಯತೀತ ಅಜೆಂಡಾ ಆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ ಹಿಂದುತ್ವದ ನೆಲವನ್ನು ಫಲವತ್ತಾದ ಭೂಮಿಯನ್ನಾಗಿಸಿಕೊಂಡಿದ್ದಾರೆ. ಈಗ ಅವರು ಬಹುಸಂಖ್ಯಾತರ ಬೆಳೆಯನ್ನು ಬೆಳೆಯಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳನ್ನು ಅಧಿಕಾರಕ್ಕೆ ತರುವುದು 2021ರ ಸೆಕ್ಯೂಲರ್ ಅಜೆಂಡಾ ಆಗಿದೆಯಂತೆ. ವ್ಹಾ ! ಭಾರತ ಎಲ್ಲ ಧರ್ಮೀಯ ಜನರಿಗೆ ಸೇರಿದೆ ಹಾಗೂ ಯಾವುದೇ ಧರ್ಮದಲ್ಲಿ ವಿಶ್ವಾಸ ಹೊಂದಿರದವರಿಗೂ ಕೂಡ ಸೇರಿದೆ ಎಂದು ಓವೈಸಿ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಹಿಂದುತ್ವವನ್ನು ಐಎಸ್ ಮತ್ತು ಇಸ್ಲಾಮಿಕ್ ಸ್ಟೇಟ್ನಂತಹ ಭಯೋತ್ಪಾದಕ ಸಂಘಟನೆಗೆ ಹೋಲಿಸಿದ್ದರು. ಅಂದಿನಿಂದ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಅಂದಿನಿಂದ ರಾಹುಲ್ ಗಾಂಧಿ ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಹೇಳುವುದರಲ್ಲಿ ನಿರತರಾಗಿದ್ದಾರೆ. ಭಾನುವಾರ ಮತ್ತೊಮ್ಮೆ ಈ ವ್ಯತ್ಯಾಸವನ್ನು ವಿವರಿಸಿದ ರಾಹುಲ್ ಗಾಂಧಿ, “ಹಿಂದೂ ಎಂದರೆ ಎಲ್ಲ ಧರ್ಮಗಳನ್ನು ಗೌರವಿಸುವವನು, ಎಲ್ಲರನ್ನು ತಬ್ಬಿಕೊಳ್ಳುವವನು ಮತ್ತು ಯಾರಿಗೂ ಹೆದರದವನು ಎಂದು ಹೇಳಿದ್ದಾರೆ.
ಹಿಂದುತ್ವವಾಗಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರ ಬೇಕು. ಸತ್ಯದ ಕುರಿತು ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. 2014ರಿಂದ ಹಿಂದುತ್ವವಾದಿಗಳ ಅಧಿಕಾರ ನಡೆಯುತ್ತಿದೆ, ಹಿಂದೂಗಳದ್ದಲ್ಲ. ಹೀಗಾಗಿ ನಾವು ಹಿಂದುತ್ವವಾದಿಗಳನ್ನು ಅಧಿಕಾರದಿಂದ ತೊಲಗಿಸಬೇಕಿದೆ ಹಾಗೂ ಮತ್ತೊಮ್ಮೆ ಹಿಂದುಗಳನ್ನು ಅಧಿಕಾರಕ್ಕೆ ತರಬೇಕಿದೆ’ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದರು.
.
ನಿಮ್ಮ ಕಾಮೆಂಟ್ ಬರೆಯಿರಿ