ಪಹಣಿ ಹಕ್ಕು ದಾಖಲೆ ತಿದ್ದುಪಡಿ ನಿಯಮಗಳ ಸರಳೀಕರಣಕ್ಕೆ ಕ್ರಮ : ಸಚಿವ ಅಶೋಕ

ಸುವರ್ಣಸೌಧ(ಬೆಳಗಾವಿ): ಕಂದಾಯ ಇಲಾಖೆಯಲ್ಲಿ ಪಹಣಿಯಲ್ಲಿನ ಹಕ್ಕು ದಾಖಲೆ ತಿದ್ದುಪಡಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಮತ್ತಷ್ಟು ಸರಳಿಕರಣ ಮಾಡಲಾಗುವುದು. ಹೆಚ್ಚೆಚ್ಚು ಕಂದಾಯ ಅದಾಲತ್‍ಗಳನ್ನು ನಡೆಸುವುದರ ಮೂಲಕ ಹಕ್ಕು ದಾಖಲೆ ತಿದ್ದುಪಡಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಮರಿತಿಬ್ಬೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸಲಾಗಿದೆ ಎಂದು ತಿಳಿಸಿದರು.
2019ರ ಜನವರಿ 1ರಿಂದ 2021ರ ನವೆಂಬರ್ 30ರ ವರೆಗೆ ಕಂದಾಯ ಅದಾಲತ್‍ನಲ್ಲಿ ಆರ್‌ಟಿಸಿ ತಿದ್ದುಪಡಿ ಬಗ್ಗೆ 193687 ಅರ್ಜಿಗಳು ಸ್ವೀಕೃತವಾಗಿದ್ದು, ಮೋಜಣಿ ವ್ಯವಸ್ಥೆ ಅಡಿ 373234 ಆರ್‌ಟಿಸಿ ತಿದ್ದುಪಡಿಯ ಬಗ್ಗೆ ಸ್ವೀಕೃತವಾಗಿರುತ್ತದೆ. ಈ ಪೈಕಿ ಕಂದಾಯ ಅದಾಲತ್‍ನಲ್ಲಿ 193687 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದ ಅವರು ಮೋಜಿಣಿ ವ್ಯವಸ್ಥೆ ಅಡಿ 207589 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 165645 ಅರ್ಜಿಗಳು ತಿದ್ದುಪಡಿಗೆ ಬಾಕಿ ಇವೆ ಎಂದು ಅವರು ತಿಳಿಸಿದರು.
ಹಕ್ಕು ದಾಖಲೆ ತಿದ್ದುಪಡಿ(ಆರ್‍ಆರ್‍ಟಿ)ಯನ್ನು ಆನ್‍ಲೈನ್ ಅಥವಾ ಸಕಾಲ ವ್ಯಾಪ್ತಿಗೆ ತರಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಅಶೋಕ ಹಕ್ಕು ದಾಖಲೆ ತಿದ್ದುಪಡಿ ಅನಗತ್ಯ ವಿಳಂಬ ಹಾಗೂ ಭ್ರಷ್ಟಾಚಾರ ತಾಂಡವಾಡುತ್ತಿರುವುದರ ಕುರಿತ ದೂರುಗಳು ಬಂದಲ್ಲಿ ಜಿಲ್ಲಾಧಿಕಾರಿ/ಸಹಾಐಕ ಆಯುಕ್ತರಿಂದ ತನಿಖಾ ವರದಿ ಪಡೆದು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ವಿಶೇಷ ಸಭೆ ಕರೆದು ಸಮಸ್ಯೆಗೆ ಪರಿಹಾರ:
ಪಹಣಿ, ಭೂ ಮಂಜೂರಾತಿ, ಹಕ್ಕು ತಿದ್ದುಪಡಿಯಂತ ಸಮಸ್ಯೆಗಳು ಕಳೆದ 40 ವರ್ಷಗಳಿಂದ ಇವೆ. ಮಂಜೂರಾತಿ(ಗ್ರ್ಯಾಂಟ್)ಪತ್ರ ಒಬ್ಬರಿಗಿದ್ದರೇ ಭೂಮಿಯಲ್ಲಿ ಮತ್ತೊಬ್ಬರು ವ್ಯವಸಾಯ ಮಾಡುತ್ತಿದ್ದಾರೆ; ಯಾರಿಗೆ ಅದರ ಒಡೆತನ ನೀಡಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಸದನದಲ್ಲಿ ತಿಳಿಸಿದ ಸಚಿವ ಅಶೋಕ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿಶೇಷ ಸಭೆ ಕರೆಯಲು ತಿಳಿಸಿದ್ದು,ತಮ್ಮ ಅಭಿಪ್ರಾಯಗಳನ್ನು ಸಹ ಆಲಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
2 ಸಾವಿರ ಪರವಾನಿಗೆ ಭೂಮಾಪಕರ ನೇಮಕ:
ಈಗಾಗಲೇ 841 ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಸದನಕ್ಕೆ ತಿಳಿಸಿದರು.
ಇಲಾಖೆಯಲ್ಲಿ ಈಗಾಗಲೇ 3500 ಭೂಮಾಪಕರಿದ್ದಾರೆ. ಹೊಸದಾಗಿ ನೇಮಿಸಿಕೊಳ್ಳುವ ಪರವಾನಿಗೆ ಭೂಮಾಪಕರನ್ನು ಸೇರಿದಂತೆ ಎಲ್ಲರನ್ನೂ ಬಳಸಿಕೊಂಡು ನಾಲ್ಕೈದು ತಿಂಗಳಲ್ಲಿ ಪೆಂಡಿಂಗ್ ಇರುವ ಭೂ ಸರ್ವೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement