ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಂಬೈ ಶಾಖೆಯಲ್ಲಿ ದರೋಡೆ ಮಾಡಲು ನುಗ್ಗಿದ್ದ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿ, ಓರ್ವ ಉದ್ಯೋಗಿಯನ್ನ ಕೊಲೆ ಮಾಡಿ, ಎರಡೂವರೆ ಲಕ್ಷ ರೂ. ದೋಚಿ ಪರಾರಿಯಾದ ಘಟನೆ ನಡೆದಿದ್ದು, ಕೇವಲ ಎಂಟು ತಾಸಿನಲ್ಲಿ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈನ ದಹಿಸರ್ನ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದ ಆರೋಪಿಗಳು ದರೋಡೆ ವೇಳೆ ಗುಂಡು ಹಾರಿಸಿದ್ದರಿಂದ ಓರ್ವ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ದೋಚಿ ಪರಾರಿಯಾಗಿದ್ದ ಇಬ್ಬರನ್ನು ಬಂಧಿಸಲು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 8 ತಂಡ ರಚನೆ ಮಾಡಲಾಗಿತ್ತು. ಬ್ಯಾಂಕ್ನೊಳಗೆ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ದರೋಡೆಕೋರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬ್ಯಾಂಕಿನೊಳಗೆ ನುಗ್ಗಿದ್ದ ವೇಳೆ ಬ್ಯಾಂಕ್ ಸಿಬ್ಬಂದಿ ಸಂದೇಶ್ ಗೋಮನೆ ಎಂಬವರು ಹಣ ತುಂಬಿದ್ದ ಬ್ಯಾಗ್ ನೀಡಲು ನಿರಾಕರಿಸಿದ್ದರಿಂದ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ತದನಂತರ ದರೋಡೆಕೋರರು ಹಣ ದೋಚಿ ಪರಾರಿಯಾಗಿದ್ದರು.
ಬಿಟ್ಟು ಹೋದ ಚಪ್ಪಲಿ ಮೂಲಕ ಆರೋಪಿಗಳನ್ನು ಬಂಧಿಸಿದ ಪೊಲೀಸರು..:
ಕಳ್ಳತನ ಮಾಡಲು ಬ್ಯಾಂಕ್ನೊಳಗೆ ನುಗ್ಗಿರುವ ದುಷ್ಕರ್ಮಿಗಳ ಪೈಕಿ ಓರ್ವ ಬ್ಯಾಂಕ್ನೊಳಗೆ ಒಂದು ಚಪ್ಪಲಿ ಬಿಟ್ಟು ಹೋಗಿದ್ದ. ಅದರ ಸಹಾಯದಿಂದಲೇ ಪೊಲೀಸರು ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ಶೋಧಕಾರ್ಯಕ್ಕಾಗಿ ಶ್ವಾನದಳದ ಸಹಾಯ ಪಡೆದುಕೊಳ್ಳಲಾಗಿತ್ತು ಎಂದಿದ್ದಾರೆ.
ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಉತ್ತರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವಿಂದ್ ಪಡವಾಲ್, “ಬ್ಯಾಂಕಿನ ದಹಿಸರ್ ಶಾಖೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ನಂತರ ಒಬ್ಬ ಎಸ್ಬಿಐ ಗುತ್ತಿಗೆ ಉದ್ಯೋಗಿ ಮೃತಪಟ್ಟಿದ್ದಾರೆ. ದರೋಡೆಕೋರರಲ್ಲಿ ಒಬ್ಬ ನೌಕರನ ಮೇಲೆ ಗುಂಡು ಹಾರಿಸಿದರು. ದರೋಡೆ ಮಾಡಿದ ನಂತರ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಇಬ್ಬರೂ ಕೋವಿಡ್ -19 ಮಾಸ್ಕ್ಗಳನ್ನು ಧರಿಸಿದ್ದರು ಮತ್ತು ಸ್ಕಾರ್ಫ್ ಮತ್ತು ಟೊಪ್ಪಿಯಿಂದ ತಲೆಯನ್ನು ಮುಚ್ಚಿದ್ದರು ಎಂದು ತಿಳಿಸಿದ್ದಾರೆ.
ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ, ದರೋಡೆಕೋರರು ಸುಮಾರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದು, ದಹಿಸರ್ ರೈಲ್ವೆ ನಿಲ್ದಾಣದ ಕಡೆಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದೆ.
ವರದಿಗಳ ಪ್ರಕಾರ, ದರೋಡೆಯ ಸಮಯದಲ್ಲಿ, ಬ್ಯಾಂಕ್ ಮುಚ್ಚುವ ಸಮಯವಾಗಿದ್ದರಿಂದ ಕನಿಷ್ಠ ಎಂಟು ಉದ್ಯೋಗಿಗಳಿದ್ದರು. ಬ್ಯಾಂಕ್ ಜನಸಂದಣಿ ಇಲ್ಲದ ಪ್ರದೇಶದಲ್ಲಿದೆ ಮತ್ತು ಕಡಿಮೆ ಕಣ್ಗಾವಲು ಹೊಂದಿರುವ ಕಾರಣ ಬ್ಯಾಂಕ್ ಅನ್ನು ಗುರಿಯಾಗಿರಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.
ಈ ವರ್ಷ ನಗರದಲ್ಲಿ ಶಸ್ತ್ರಸಜ್ಜಿತವಾಗಿ ಬ್ಯಾಂಕ್ನಲ್ಲಿ ದರೋಡೆ ನಡೆಸಿದ ಎರಡನೇ ಪ್ರಕರಣ ಇದಾಗಿದೆ. ಜುಲೈನಲ್ಲಿ, ಐಸಿಐಸಿಐ ಬ್ಯಾಂಕ್ನ ವಿರಾರ್ (ಪೂರ್ವ) ಶಾಖೆಯ ಡೆಪ್ಯುಟಿ ಮ್ಯಾನೇಜರ್ನನ್ನು ಬ್ಯಾಂಕಿನ ಮಾಜಿ ಮ್ಯಾನೇಜರ್ ಕೊಂದು ಬ್ಯಾಂಕಿನ ಲಾಕರ್ನಿಂದ 3.38 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಲು ಪ್ರಯತ್ನಿಸಿದ ಬ್ಯಾಂಕಿನ ಕ್ಯಾಷಿಯರ್ ಗಂಭೀರವಾಗಿ ಗಾಯಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ