ಪಿಎಸ್ಐ ಮೇಲೆ‌ ಹಲ್ಲೆ ನಡೆಸಿದ್ದ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದ ಯಶವಂತಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಹಾಗೂ ಕಾನ್​​ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್ ಕಾಲಿಗೆ ಸಂಜಯನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ದಿವಾಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದು ತಿಂಗಳ ಹಿಂದೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ವೃದ್ಧರ ಮನೆಗೆ ನುಗ್ಗಿದ ಆರೇಳು ಆರೋಪಿಗಳು ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಲಾಗಿತ್ತು. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆದಿತ್ತು. ಆಗ ಈ ರೌಡಿಶೀಟರ್‌ ಪಿಎಸ್ಐ ಮೇಲೆ‌ ಹಲ್ಲೆ ನಡೆಸಿದ್ದರಿಂದ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ದರೋಡೆ ಪ್ರಕರಣದ ತನಿಖೆ ಕೈಗೊಂಡಿದ್ದ ಯಶವಂತಪುರ ಪಿಎಸ್‌ಐ ವಿನೋದ್ ರಾಥೋಡ್‌ ಅವರಿಗೆ ಮಂಗಳವಾರ ತಡ ರಾತ್ರಿ 11 ಗಂಟೆ ಸುಮಾರಿಗೆ ಸಂಜಯನಗರ ಠಾಣಾ ವ್ಯಾಪ್ತಿಯ ಹೆಬ್ಬಾಳ ಮೇಲು ಸೇತುವೆ ಬಳಿ ಮೂವರು ಆರೋಪಿಗಳು ಓಡಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾನ್‌ಸ್ಟೇಬಲ್ ವಲ್ಲಿಸಾಬ್ ಜತೆ ಸ್ಥಳಕ್ಕೆ ಹೋಗಿದ್ದರು. ಆಗ ಆರೋಪಿಗಳು ಪೊಲೀಸರನ್ನು ಕಂಡು ಭೂಪಸಂದ್ರದ ರೈಲ್ವೆ ಗೇಟ್ ಮೂಲಕ ಪರಾರಿಯಾಗಲು ಯತ್ನಿಸಿದ್ದರು. ಹಿಂಬಾಲಿಸಿದ ಪಿಎಸ್‌ಐ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದರು. ಈ ವೇಳೆ ಆರೋಪಿಯೊಬ್ಬ ಕಾನ್‌ಸ್ಟೇಬಲ್ ವಲ್ಲಿಸಾಬ್​​ರನ್ನು ತಳ್ಳಿದ್ದಾನೆ. ಕೆಳಗೆ ಬೀಳುತ್ತಿದ್ದ ವಲ್ಲಿಸಾಬ್​​ರನ್ನು ಹಿಡಿದುಕೊಳ್ಳಲು ಪಿಎಸ್‌ಐ ವಿನೋದ್ ಮುಂದಾದಾಗ ಆರೋಪಿಗಳು ಪಿಎಸ್‌ಐ ಎರಡೂ ಕೈಗಳ ಮೊಣಕೈಗೆ ಚಾಕುವಿನಿಂದ ಇರಿದಿದ್ದರು.‌
ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಆರೋಪಿಯು ಜಾಲಹಳ್ಳಿ ಬಳಿ ಅಡಗಿಕೊಂಡಿರುವ ಮಾಹಿತಿ ಅರಿತು ಇಂದು ಬೆಳ್ಳಂಬೆಳಗ್ಗೆ ಬಂಧಿಸಲು ಹೋದಾಗ ಕಾನ್​​ಸ್ಟೇಬಲ್ ಪ್ರದೀಪ್ ಮೇಲೆ ಹಲ್ಲೆ ಮಾಡಿದ್ದಾನೆ. ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದರೂ ಮತ್ತೆ ಹಲ್ಲೆಗೆ ಮುಂದಾಗಿದ್ದು, ರೌಡಿಶೀಟರ್ ಎಡಗಾಲಿಗೆ ಇನ್​​ಸ್ಪೆಕ್ಟರ್ ಬಾಲರಾಜ್ ಗುಂಡು ಹೊಡೆದು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಯಶವಂತಪುರ, ಗಿರಿನಗರ, ಸಂಜಯನಗರ ಪೊಲೀಸ್ ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಪ್ರಮುಖ ಸುದ್ದಿ :-   ಜಗತ್ತಿಗೆ ಹೇಳುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೆ ; ಬಾಲಾಕೋಟ್ ಸ್ಟ್ರೈಕ್ ಬಗ್ಗೆ ಬಿಚ್ಚಿಟ್ಟ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement