ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಕೆಲಸ ಮಾಡುತ್ತಿದ್ದ ವೇಳೆ ನಡೆದ ದುರ್ಘಟನೆಯಲ್ಲಿ ಜೆಸಿಬಿ ಕೆಳಗೆ ಸಿಲುಕಿ ಪುಟ್ಟ ಕಂದಮ್ಮ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಮಗುವನ್ನು ಸಿಮಿಯಾನ್(3) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ವೇಳೆಯಲ್ಲಿ ಜೆಸಿಬಿ ಚಾಲಕನ ಅಚಾತುರ್ಯದಿಂದಾಗಿ ಈ ಅವಘಡ ಸಂಭವಿಸಿದೆ.
ಶನಿವಾರ ಬೆಳಗ್ಗೆ 5:30 ರಲ್ಲಿ ಸಿಮಿಯಾನ್ ನಿದ್ದೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಬಿಟ್ಟು ಡೇವಿಡ್ ಜಾನ್ ಹೊರ ಹೋಗಿದ್ದರು. ಆ ವೇಳೆ ಎಚ್ಚರಗೊಂಡ ಸಿಮಿಯಾನ್, ಮನೆ ಮುಂದೆ ನಿಲುಗಡೆ ಮಾಡಿದ್ದ ಹಿಟಾಚಿ ವಾಹನದ ಹಿಂದಿನ ಚಕ್ರದ ಬಳಿ ಕುಳಿತಿದ್ದ ಎನ್ನಲಾಗಿದೆ. ಚಾಲಕ ಶಂಕರ್ ನಾಯಕ್ ಹಿಂದೆ ಗಮನಿಸದೆ ಹಿಟಾಚಿ ಚಲಾಯಿಸಿದ್ದಾನೆ. ಪರಿಣಾಮ ಸಿಮಿಯಾನ್ ಮೇಲೆ ಹಿಟಾಚಿ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 5 ಗಂಟೆ ಸುಮಾರಿಗೆ ತಂದೆ ಡೇವಿಡ್ ಎಂಬವರ ಮೂರು ವರ್ಷದ ಮಗು ಸಿಮಿಯಾನ್ ಕರೆದುಕೊಂಡು ಹೋಗುತ್ತಿದ್ದಾಗ ಹಿಮ್ಮುಖವಾಗಿ ಜೆಸಿಬಿ ಚಾಲನೆ ಮಾಡಿಕೊಂಡು ಬಂದಿರುವ ಚಾಲಕ ಮಗುವಿನ ಮೇಲೆ ಹತ್ತಿಸಿದ್ದಾನೆ ಎನ್ನಲಾಗಿದೆ.
ಘಟನೆ ಸ್ಥಳಕ್ಕೆ ಉಪ್ಪಾರ ಪೇಟೆ ಪೋಲಿಸ್ ಠಾಣಾ ಸಿಬ್ಬಂದಿಗಳು ಭೇಟಿ ನೀಡಿದ್ದು, ಜೆಸಿಬಿ ಚಾಲಕ ಶಂಕರ್ ನಾಯಕ್ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಗುವನ್ನು ಕಳೆದುಕೊಂಡು ತಾಯಿ ತಂದೆಯ ಅಕ್ರಂದ ಮುಗಿಲು ಮುಟ್ಟಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ