ಮಂಗಳೂರು: ವಿಶ್ವ ಕೊಂಕಣಿ ಸರ್ದಾರ ಎಂದು ಜನಪ್ರಿಯರಾಗಿದ್ದ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ ಮಾಧವ ಶೆಣೈ(87) ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಕಳೆದೆರಡು ತಿಂಗಳಿಂದ ವಯೋಸಹಜವಾಗಿ ಅವರ ಆರೋಗ್ಯ ಹದಗೆಟ್ಟಿತ್ತು. ನಾಳೆ ಜನವರಿ 3 ರಂದು ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9 ರಿಂದ 10ರ ವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.
ಬಸ್ತಿ ವಾಮನ ಶೆಣೈ ಅವರು 6 ನವೆಂಬರ್ 1934 ರಂದು ಬಂಟ್ವಾಳದಲ್ಲಿ ಜನಿಸಿದ್ದರು.ವಾಮನ ಶೆಣೈ ಅವರ ತಂದೆ ಬಸ್ತಿ ಮಾಧವ ಶೆಣೈ ಅವರು ತಮ್ಮ ನಾಯಕತ್ವದ ಗುಣಗಳಿಂದಾಗಿ ಎಲ್ಲ ಸಮುದಾಯದ ಜನರಿಂದ ಗೌರವಕ್ಕೆ ಪಾತ್ರರಾಗಿದ್ದರು.
.ಬಸ್ತಿ ವಾಮನ ಶೆಣೈ ಅವರು 1954 ಮತ್ತು 1962 ರ ನಡುವೆ ಬಂಟ್ವಾಳದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಟ್ರೇಡ್ ಯೂನಿಯನ್ ವಿಭಾಗ ಇಂಟಕ್ (INTUC) ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು 1958 ರಲ್ಲಿ ಸರಸ್ವತಿ ಕಲಾ ಪ್ರಸಾರಕ ಸಂಘ ಮತ್ತು ಸರಸ್ವತಿ ಸಂಗೀತ ಶಾಲೆ ಬಂಟ್ವಾಳ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 1980 ರಿಂದ ಕೊಂಕಣಿ ಭಾಷಾ ಮಂಡಲದಲ್ಲಿ ತೊಡಗಿಸಿಕೊಂಡಿದ್ದರು. ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಆಗ್ರಹಿಸಿ ಜನರನ್ನು ಸಂಘಟಿಸಲು ಕೊಂಕಣಿ ಜಾಥಾ ಚಳವಳಿಯ ಸಂಘಟನಾ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಯಿತು. ಅವರು 1993ರಲ್ಲಿ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾಗಿದ್ದು, 1994-95ರಲ್ಲಿ ಅವರ ಪ್ರಯತ್ನದಿಂದಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು.
ವಾಮನ ಶೆಣೈ ಅವರು 1995 ರಲ್ಲಿ ಮಂಗಳೂರಿನಲ್ಲಿ ಪ್ರಥಮ ವಿಶ್ವ ಕೊಂಕಣಿ ಸಮಾವೇಶವನ್ನು ಆಯೋಜಿಸಿದ್ದು, ಅವರಿಗೆ ‘ವಿಶ್ವ ಕೊಂಕಣಿ ಸರ್ದಾರ’ (ಕೊಂಕಣಿಯ ವಿಶ್ವ ನಾಯಕ) ಎಂಬ ಬಿರುದು ನೀಡಿ ಗೌರವಿಸಲಾಗಿತ್ತು.
1996ರಲ್ಲಿ ಮೊದಲ ಉತ್ತರ ಅಮೆರಿಕಾದ ಕೊಂಕಣಿ ಸಮಾವೇಶವು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದ್ದು, 1997ರಲ್ಲಿ ವಾಮನ ಶೆಣೈ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದರು ಮತ್ತು 2001 ರವರೆಗೆ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಅವರು ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿಯನ್ನು ಐಚ್ಛಿಕ ಮೂರನೇ ಭಾಷೆಯಾಗಿ ಪರಿಚಯಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು.
2002ರಲ್ಲಿ ಮಂಗಳೂರಿನಲ್ಲಿ ಅಖಿಲ ಭಾರತ ಕೊಂಕಣಿ ಪರಿಷತ್ತಿನ 20ನೇ ಅಧಿವೇಶನವನ್ನು ಆಯೋಜಿಸಿದ್ದರು. 2004 ರಲ್ಲಿ ಅವರು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿದ್ದು, 2008 ರಲ್ಲಿ, ಕೆಎಲ್ಸಿಎಫ್ (KLCF) ಬ್ಯಾನರ್ ಅಡಿಯಲ್ಲಿ, ಶೆಣೈ ಅವರು ವಿಶ್ವ ಕೊಂಕಣಿ ಅಭಿಯಾನವನ್ನು ಪ್ರಾರಂಭಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ