ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆ ಶಿವಕುಮಾರ

ಬೆಂಗಳೂರು: ನಾಕಾಬಂದಿ ಹಾಕಿ ಕಾರ್ಯಕರ್ತರನ್ನು ತಡೆದರೂ, ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ನಿಲ್ಲುವುದಿಲ್ಲ. ಅವರು ಏನು ಬೇಕಾದರೂ ಮಾಡಲಿ, ಕಾರ್ಯಕರ್ತರನ್ನು ಬೇಕಾದರೆ ತಡೆಯಲಿ. ಸಿದ್ದರಾಮಯ್ಯ, ನಮ್ಮ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಪಾದಯಾತ್ರೆ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಆಡಳಿತ ಪಕ್ಷದವರೇ ಕೊವಿಡ್ ಕೇಸ್‌ಗಳನ್ನು ಹೆಚ್ಚಿಸಿ ನಿರ್ಬಂಧ ತಂದಿದ್ದಾರೆ. ಚುನಾವಣೆ ಸೋಲಿನ ಭೀತಿಯಿಂದ ಪಾದಯಾತ್ರೆಗೆ ತಡೆಯೊಡ್ಡಲು ಮುಂದಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಸ್ಪೆಷಲ್ ಬಿಜೆಪಿ ಕರ್ಫ್ಯೂ ತಂದು, ವರ್ತಕರು, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಮೊಟಕುಗೊಳಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ಹೇರಿದ್ದಾರೆ. ಇದು ಕೋವಿಡ್‌ ಅಲ್ಲ, ಬಿಜೆಪಿ ಕಾಯಿಲೆ ಎಂದು ಅವರು ಕಿಡಿಕಾರಿದರು. 15 ದಿನಗಳ ಹಿಂದೆಯೇ ಸಂಗಮದಲ್ಲಿ ಹೋಟೆಲ್ ಬುಕ್ ಮಾಡಿದ್ದೆವು. ಆದರೆ ಈಗ ಹೊಟೆಲ್ ಮಾಲೀಕರನ್ನು ಹೆದರಿಸಿ ಹೋಟೆಲ್​ ಬಂದ್ ಮಾಡಿಸುತ್ತಿದ್ದಾರೆ. ಹೋಟೆಲ್​ನಲ್ಲಿ ನೀವು ರೂಮ್ ನೀಡದಿದ್ದರೆ ನಾವು ಪ್ರಕೃತಿ ಮಡಿಲಲ್ಲೇ ಮಲಗುತ್ತೇವೆ ಎಂದು ಹೇಳಿದರು. ನೀವು ನಮ್ಮನ್ನು ಒಂದು ದಿನ ಬಂಧನದಲ್ಲಿ ಇರಿಸಬಹುದು. ಮರುದಿನ ಬಿಡುಗಡೆ ಮಾಡಲೇ ಬೇಕಾಗುತ್ತದೆ. ಸೋಮವಾರದಿಂದ ಕರ್ಫ್ಯೂ ಇಲ್ಲ. ಹೀಗಾಗಿ ನಮ್ಮನ್ನು ತಡೆಯಲು ಆಗುವುದಿಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಬ್ಬಿ ವೀರಣ್ಣ ನಾಟಕ ಕಂಪನಿ ನಡೆಸುತ್ತಿದ್ದಾರೆ. ಇಂದು ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾವ ಸ್ಥಿತಿ ಇತ್ತು ? ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಚಿವರು ಏಕೆ ಬೇಕಿತ್ತು? ಸಚಿವರು ಭಾಗಿಯಾಗಿದ್ದಕ್ಕೆ ಪ್ರಕರಣ ದಾಖಲಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪಾದಯಾತ್ರೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಎಲ್ಲಿ ಬಂಧಿಸುತ್ತೀರೋ ಅಲ್ಲಿಂದಲೇ ನಮ್ಮ ಹೋರಾಟ ಆರಂಭವಾಗುತ್ತದೆ ಎಂದು ಘೋಷಿಸಿದರು.

ಪ್ರಮುಖ ಸುದ್ದಿ :-   ಶಿರಸಿ : ಜುಲೈ 13ಕ್ಕೆ ಕರ್ಮಫಲ ಕಾದಂಬರಿ ಲೋಕಾರ್ಪಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement