ಬೆಂಗಳೂರು: ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರೇವಣ್ಣಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಈಗ ಕೋವಿಡ್ ಕಠಿಣ ನಿಯಮ ಜಾರಿಯಲ್ಲಿದ್ದರೂ ಲೆಕ್ಕಿಸದೆ ಕಾಂಗ್ರೆಸ್ ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ನಾಯಕರು ಜನವರಿ 9ರಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಂದು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಕೊರೊನಾ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದರೂ ಪಾದಯಾತ್ರೆ ಮುಂದುವರಿದಿದೆ.
ಈ ವಿಚಾರವನ್ನು ಪ್ರಸ್ತಾಪ ಮಾಡಿದ ಬಿಜೆಪಿ, ಕಾಂಗ್ರೆಸ್ ಪ್ರಾಯೋಜಿತ ಸುಳ್ಳಿನಜಾತ್ರೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಾಂಗ್ರೆಸ್ ಬೆಂಗಳೂರಿಗೆ ನೀರು ಕೊಡುತ್ತೇವೆ ಹೇಳಿ, ಈಗ ಬೆಂಗಳೂರಿಗೆ ಕೋವಿಡ್ ಸೋಂಕು ಹಂಚುತ್ತಿದೆ. ಡಿ.ಕೆ.ಶಿವಕುಮಾರ ಅವರೇ ನೀವು ಕೋವಿಡ್ಯಾತ್ರೆ ಮುಂದುವರೆಸಿ ಬೆಂಗಳೂರನ್ನು ಕೋವಿಡ್ ಹಬ್ ಮಾಡುವ ಯೋಜನೆಯಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಭಾನುವಾರ ಎಚ್.ಎಂ. ರೇವಣ್ಣ ಅವರು ನಗಾರಿ ಹೊಡೆಯುವ ಮೂಲಕ ಮೆಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಈ ವಿಚಾರವನ್ನೇ ಬಿಜೆಪಿ ಪ್ರಸ್ತಾಪಿಸಿ ಡಿಕೆ ಶಿವಕುಮಾರ್ ಅವರನ್ನು ಕುಟುಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ