ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್​ ಶೋ, ಮೆರವಣಿಗೆಗೆ ಫೆ.11ರ ವರೆಗೂ ಅವಕಾಶ ಇಲ್ಲ; ಆದ್ರೆ ಕೊಂಚ ಸಡಿಲಿಕೆ ಮಾಡಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರೋಡ್​ಶೋ, ರ್ಯಾಲಿಗಳು ಮತ್ತು ಪ್ರಚಾರ ಮೆರವಣಿಗೆಗಳನ್ನು ನಡೆಸಲು ಹೇರಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಫೆ.11ರ ವರೆಗೆ ವಿಸ್ತರಿಸಿದೆ. ಇಂದು, ಸೋಮವಾರ ಬೆಳಗ್ಗೆ ಸಭೆ ನಡೆಸಿದ ಬಳಿಕ, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, 2022ರ ಫೆ.11ರವರೆಗೂ ಯಾವುದೇ ರೀತಿಯ ರೋಡ್​ ಶೋ, ಪಾದಯಾತ್ರೆಗಳು, ಸೈಕಲ್​/ಬೈಕ್​/ ಇನ್ನಿತರ ವಾಹನಗಳ ರ್ಯಾಲಿಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಮೊದಲಬಾರಿಗೆ ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದ ಚುನಾವಣಾ ಆಯೋಗ, ಜನವರಿ 15ರ ವರೆಗೆ ರೋಡ್​ ಶೋ, ರ್ಯಾಲಿಗಳಿಗೆ ಅವಕಾಶ ಇಲ್ಲ ಎಂದು ಹೇಳಿತ್ತು. ನಂತರ ಜನವರಿ 31ರವರೆಗೆ ವಿಸ್ತರಿಸಿತು. ದೇಶದ ಕೊವಿಡ್​ 19 ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುಶೀಲ್​ ಚಂದ್ರ ಮತ್ತು ಆಯುಕ್ತರಾದ ರಾಜೀವ್​ ಕುಮಾರ್​, ಅನೂಪ್​ ಚಂದ್ರ ಪಾಂಡೆ ಅವರು ಈಗ ನಿರ್ಬಂಧ ಅವಧಿಯನ್ನು ಫೆ.11ರವರೆಗೆ ವಿಸ್ತರಿಸಿದ್ದಾರೆ.

ಹಾಗಿದ್ದಾಗ್ಯೂ ಕೆಲವು ನಿಗದಿ ಪಡಿಸಿದ ತೆರೆದ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಸ್ಪರ್ಧಿಸಲಿರುವ ಅಭ್ಯರ್ಥಿಗಳು ಸಾರ್ವಜನಿಕ ಪ್ರಚಾರ ಸಭೆ ನಡೆಸಬಹುದು. ಆದರೆ ಅದರಲ್ಲಿ 1000 ಜನರು ಸೇರಬಹುದಾಗಿದೆ. ಈ ಹಿಂದೆ 500ರಷ್ಟು ಜನ ಅಂದರೆ ಮಾತ್ರ ಶೇ.50 ಸಾಮರ್ಥ್ಯದಲ್ಲಿ ಜನಮಿತಿ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಹಾಗೇ ಮನೆ-ಮನೆ ಪ್ರಚಾರದಲ್ಲಿ 10 ಜನರ ಬದಲು 20 ಜನ ಸೇರಬಹುದು ಎಂದೂ ಚುನಾವಣಾ ಆಯೋಗ ಅನುಮತಿ ನೀಡಿದೆ. ಅಂದರೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ 20 ಜನರು ಸೇರಬಹುದಾಗಿದೆ.ಇನ್ನುಳಿದಂತೆ ಕೊವಿಡ್ 19 ನಿಯಮ ಪಾಲನೆ ಮಾಡಬೇಕಾಗಿದೆ. ರಾಜಕೀಯ ಮುಖಂಡರು ಒಳಾಂಗಣ ಸಭೆ ನಡೆಸಿದರೆ 500 ಮಂದಿ ಸೇರಬಹುದು ಎಂದು ಎಲೆಕ್ಷನ್​ ಕಮಿಷನ್ ಹೇಳಿದೆ. ಈ ಹಿಂದೆ 300 ಮಂದಿಗೆ ಮಾತ್ರ ಅನುಮತಿ ಇತ್ತು.

ಪ್ರಮುಖ ಸುದ್ದಿ :-   ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement