ಮಂಡ್ಯ: ಬೆಚ್ಚಿಬೀಳಿಸಿದ್ದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಭೇದಿಸಿರುವ ಪೊಲೀಸರು ಈ ಸಂಬಂಧ ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ..!
ಫೆಬ್ರವರಿ 6ರಂದು ಮಂಡ್ಯದ ಕೆಆರ್ ಎಸ್ನ ಬಜಾರ್ ಲೈನ್ ಬಡಾವಣೆಯಲ್ಲಿ ಗಂಗಾರಾಮ್ ಅವರ ಪತ್ನಿ ಲಕ್ಷ್ಮೀ (32), ಹಾಗೂ ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಅಂದು ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೃತ್ಯ ನಡೆದ ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮನ ಪ್ರೇಮಿಕಾಳೇ ಕಾರಣ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಗಂಗಾರಾಮ್ ಸಂಬಂಧಿ ಲಕ್ಷ್ಮೀ(34) ಎಂಬವಳು ಗಂಗಾರಾಮನನ್ನು ಪ್ರೇಮಿಸುತ್ತಿದ್ದಳು ಹಾಗೂ ನನ್ನನ್ನು ಮದುವೆಯಾಗು ಎಂದು ಗಂಗಾರಾಮನನ್ನು ಪೀಡಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಆತ ಲಕ್ಷ್ಮೀಯನ್ನು ಮದುವೆಯಾಗಿದ್ದ. ಇದಾದ ಬಳಿಕವೂ ಸಹ ಗಂಗಾರಾಮ್ ಮತ್ತು ಕೊಲೆ ಪಾತಕಿ ಲಕ್ಷ್ಮಿ ಹೆಂಡತಿ ಮಕ್ಕಳನ್ನು ತೊರೆದು ಬಿಟ್ಟು ತನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಳು ಎಂಬುದು ಗೊತ್ತಾಗಿದೆ.
ಇವರನ್ನು ಕೊಲೆ ಮಾಡಿದರೆ ನನಗೆ ಗಂಗಾರಾಮ ಸುಲಭವಾಗಿ ಸಿಗುತ್ತಾನೆ ಎಂದು ಫೆಬ್ರವರಿ 5ರ ರಾತ್ರಿ ಮೃತ ಲಕ್ಷ್ಮೀ ಮನೆಗೆ ಈ ಹಂತಕಿ ಲಕ್ಷ್ಮಿ ಬಂದು ಜೊತೆಯಲ್ಲಿ ಊಟ ಮಾಡಿದ್ದಾಳೆ. ನಂತರ ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಎಲ್ಲರನ್ನೂ ಒಬ್ಬಳೇ ಹತ್ಯೆ ಮಾಡಿದ್ದಾಳೆ. ಊಟದಲ್ಲಿ ಮತ್ತು ಬೆರೆಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ತಾನು ತಂದಿದ್ದ ಸುತ್ತಿಗೆಯಿಂದ ಮೊದಲು ಲಕ್ಷ್ಮೀಗೆ ಬಡಿದು ಕೊಲೆ ಮಾಡಿದ್ದಾಳೆ. ನಂತರ ಎಚ್ಚರಗೊಂಡ ಮಕ್ಕಳ ಮೇಲೂ ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾಳೆ ಎಂದು ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಬೆಳಗ್ಗಿನ ಜಾವ 4ಗಂಟೆ ಸಮಯದಲ್ಲಿ ಕೆಆರ್ಎಸ್ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಮಾಡಿ, ಬೆಳಿಗ್ಗೆ 10 ಗಂಟೆ ಸುಮಾರಿಗೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಕೊಲೆ ಸ್ಥಳಕ್ಕೆ ಮತ್ತೆ ಬಂದಿದ್ದಾಳೆ. ಮೃತರ ಮನೆ ಮುಂದೆ ಕುಳಿತು ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಕ್ಯಾಮೆರಾ ದೂರ ತೆಗೆದುಕೊಂಡು ಹೋಗಿ ಎಂದು ಅವಾಜ್ ಸಹ ಹಾಕಿದ್ದಳು. ಆದರೆ ಪೊಲೀಸರಿಗೆ ಅನುಮಾನಬಂದು ವಿಚಾರಣೆ ನಡೆಸಿದಾಗ ವಿಷಯ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ