ಬೆಂಗಳೂರು: ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ ಸಚಿವ ಸಂಪುಟದಿಂದ ವಜಾ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆಗ್ರಹ ಮಾಡಿದ ನಂತರ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ – ಪ್ರತ್ಯಾರೋಪ ನಡೆದು ಪರಿಷತ್ ಕಲಾಪ ರಣರಂಗದಂತಾಯಿತು.
ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನಿಯಮ ೫೯ರಡಿ ವಿಷಯ ಪ್ರಸ್ತಾಪಿಸಿ, ಸಚಿವರು ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸಚಿವ ಸಂಪುಟದಿಂದ ವಜಾ ಮಾಡಬೇಕಾಗಿತ್ತು ಎಂದರು. ಇದಕ್ಕೆ ದನಿಗೂಡಿಸಿದ ಸಿ.ಎಂ. ಇಬ್ರಾಹಿಂ ರಾಷ್ಟ್ರ ದ್ರೋಹದ ಕೆಲಸ ಮಾಡಿದರೂ ಕಣ್ಮುಚ್ಚಿ ಕುಳಿತಿರುವ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದರು.
ಕಾಂಗ್ರೆಸ್ ಸದಸ್ಯರ ಆರೋಪ – ಪ್ರತ್ಯಾರೋಪಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಈಶ್ವರಪ್ಪ ಅವರು ಭವಿಷ್ಯದಲ್ಲಿ ಕೇಸರಿ ಧ್ವಜ ಹಾರಬಹುದು ಎಂದು ಹೇಳಿದ್ದಾರೆರೆಯೇ ಹೊರತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್ ಸದಸ್ಯರು ನೀಡಿರುವ ನಿಲುವಳಿ ನೋಟೀಸ್ ತಿರಸ್ಕರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು.
ಇದಕ್ಕೆ ಸಿ.ಎಂ. ಇಬ್ರಾಹಿಂ, ಈಶ್ವರಪ್ಪ ಹೇಳಿದ ಹೇಳಿಕೆಗೆ ದಾಖಲೆಗಳಿವೆ. ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು
ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಆಗ್ರಹವನ್ನು ತಿರಸ್ಕರಿಸಲಾಗಿದೆ ಎಂದು ಹೇಳುತ್ತಿದ್ದಂತೆ, ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಧಿಕ್ಕಾರ ಕೂಗಿದ್ದರಿಂದ ಸದನ ಗೊಂದಲದ ಗೂಡಾಯಿತು.ಈ ಹಂತದಲ್ಲಿ ಕಲಾಪ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭಾಪತಿಗಳು ಮಧ್ಯಾಹ್ನ ೩ ಗಂಟೆಗೆ ಮುಂದೂಡಿದರು.
ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರು ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಗದ್ದಲ ಎಬ್ಬಿಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಆರೋಪ – ಪ್ರತ್ಯಾರೋಪ ನಡೆದು ಕಲಾಪ ಕೆಲಕಾಲ ಮುಂದೂಡುವಂತಾಯಿತು.
ಮತ್ತೆ ಸದನ ಆರಂಭವಾದಾಗ ಬಿ.ಕೆ. ಹರಿಪ್ರಸಾದ್ ಅವರಿಗೆ ವಿಷಯ ಮಂಡಿಸಲು ಸಭಾಪತಿಗಳು ಅವಕಾಶ ಮಾಡಿಕೊಟ್ಟರು. ಹರಿಪ್ರಸಾದ್ ಅವರು, ಆರ್ ಎಸ್ ಎಸ್, ಬಿಜೆಪಿ, ಜನಸಂಘ, ಹಾವಿನಪುರ (ನಾಗ್ಪುರ) ವಿಷಯ ಪ್ರಸ್ತಾಪಿಸುತ್ತಿದ್ದಂತೆ ಮತ್ತೆ ಕೋಲಾಹಲ ಉಂಟಾಯಿತು. ಈ ನಡುವೆ ಬಿಜೆಪಿಯ ಹಲವು ಸದಸ್ಯರು ಆಕ್ಷೇಪಿಸಿ, ಹಾವಿನಪುರ ಎಂದರೇನು, ನಾಗ್ಪುರಕ್ಕೆ ಅವಮಾನ ಮಾಡಲಾಗುತ್ತಿದೆ. ಅದನ್ನು ಕಡತದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಮತ್ತೆ ಮಾತು ಮುಂದುವರೆಸಿದ ಹರಿಪ್ರಸಾದ್, ಅಸಂವಿಧಾನಿಕ ಪದ ಬಳಸಿದರೆ, ಕಡತದಿಂದ ತೆಗೆದುಹಾಕಿ ಎಂದು ಹೇಳಿದರು.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವುದನ್ನು ನೋಡಿಕೊಂಡು ಸುಮ್ಮನೆ ಕೂಡ್ರಲು ಆಗುವುದಿಲ್ಲ. ಯಾರಾದರೂ ಈ ಬಗ್ಗೆ ಮಾತನಾಡಬೇಡಿ ಎಂದರೆ, ಈ ಕ್ಷಣವೇ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು.
ಮತ್ತೊಬ್ಬ ಸದಸ್ಯ ಸಲೀಂ ಅಹಮ್ಮದ್, ಪ್ರಕಾಶ್ ರಾಥೋಡ್ ಅವರು ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಯಾಗಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತಿತರರು ಆಕ್ಷೇಪಿಸಿದರು. ಇದರಿಂದಾಗಿ ಗೊಂದಲದ ಗೂಡಾಗಿ ಪರಿಣಮಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ