ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಐದನೇ ದಿನವಾದ ಗುರುವಾರ ಸಹ ಮುಂದುವರೆಸಿತು.
ಹಿಜಾಬ್ ನಿಷೇಧಿಸಿದರೆ ಕುರಾನ್ ನಿಷೇಧಿಸಿದಂತೆ ಎಂದು ಪಾರ್ಟಿ ಇನ್ ಪರ್ಸನ್ (ಅರ್ಜಿದಾರರೇ ವಾದ ಮಂಡಿಸುವುದು) ಆದ ಹುಬ್ಬಳ್ಳಿಯ ಮನೋವೈದ್ಯ ಹಾಗೂ ವಕೀಲ ಡಾ.ವಿನಯ್ ಕುಲಕರ್ಣಿ ಹೈಕೋರ್ಟ್ನಲ್ಲಿ ವಾದಿಸಿದರು.
ಹಿಜಾಬ್ ವಿಚಾರವು ಸಮಾಜದಲ್ಲಿ ಹಿಸ್ಟೀರಿಯಾ ಸೃಷ್ಟಿಸಿದ್ದು, ಇದು ಬಡ ಮುಸ್ಲಿಮ್ ಬಾಲಕಿಯರ ಮಾನಸಿಕ ಆರೋಗ್ಯದ ಸಮತೋಲನದ ಮೇಲೆ ಪರಿಣಾಮ ಬೀರುತ್ತಿದೆ. ಹಿಜಾಬ್ ನಿಷೇಧಿಸುವುದು ಕುರಾನ್ ನಿಷೇಧಿಸುವುದಕ್ಕೆ ಸಮನಾಗುತ್ತದೆ” ಎಂದು ಅವರು ಹೇಳಿದರು.
ನಿಮಗೆ ಹಿಜಾಬ್ ಮತ್ತು ಕುರಾನ್ ಒಂದೆಯೇ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಪ್ರತಿಕ್ರಿಯಿಸಿದರು. “ನನಗಲ್ಲ. ಇಡೀ ವಿಶ್ವಕ್ಕೆ. ನಾನು ಹಿಂದೂ ಬ್ರಾಹ್ಮಣ. ಇಡೀ ಜಗತ್ತಿನಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ಕುರಾನ್ ಅನ್ವಯಿಸುತ್ತದೆ ಎಂದರು.
ಹಿಜಾಬ್ ಪ್ರಕರಣವು ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹಿಜಾಬ್, ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಗೆ ವಿರುದ್ಧವಾಗಿಲ್ಲ. ನಿಷ್ಠ ಪವಿತ್ರ ದಿನವಾದ ಶುಕ್ರವಾರದಂದಾದರೂ ಹೆಣ್ಣು ಮಕ್ಕಳು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು. ರಮ್ಜಾನ್ ಮಾಸದಲ್ಲೂ ಮುಸ್ಲಿಮರು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು” ಎಂದರು.
“ನಿಮ್ಮ 1ನೇ ಮನವಿ, 2ನೆ ಮನವಿ ಒಂದಕ್ಕೊಂದು ವಿರುದ್ಧವಾಗಿದೆ. 1ನೇ ಮನವಿಯಲ್ಲಿ ಸಮವಸ್ತ್ರ ಕೇಳಿದ್ದೀರಾ, 2ನೇ ಮನವಿಯಲ್ಲಿ ಹಿಜಾಬ್ ಕೇಳುತ್ತಿದ್ದೀರ ಎಂದು ಅರ್ಜಿದಾರರಿಗೆ ಸಿಜೆ ಪ್ರಶ್ನೆ ಮಾಡಿದ್ದಾರೆ. ಕುಚ್ ಪಾಕರ್ ಕುಚ್ ಕೋನಾ ಹೈ, ಕುಚ್ ಕೋಕರ್ ಕುಚ್ ಪಾನಾ ಹೈ ಎಂದು ಅರ್ಜಿದಾರ ಲತಾ ಮಂಗೇಶ್ಕರ್ ಹಾಡು ಉಲ್ಲೇಖಿಸಿದ್ದಾರೆ. ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿಲ್ಲ. ಹೀಗಾಗಿ ಶುಕ್ರವಾರ ಹಿಜಾಬ್ ಧರಿಸಲು ಅನುಮತಿ ಕೊಡಿ. ಒಂದು ಪಡೆಯಬೇಕಾದರೆ ಒಂದನ್ನು ಕಳೆದುಕೊಳ್ಳಬೇಕು ಎಂದು ಕುಲಕರ್ಣಿ ಹೇಳಿದ್ದಾರೆ. ಈ ವೇಳೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡು ಗುನುಗಿ “ಕೆಲವನ್ನು ಪಡೆದುಕೊಂಡು ಕಳೆದುಕೊಳ್ಳಬೇಕಾಗುತ್ತದೆ, ಕೆಲವನ್ನು ಕಳೆದುಕೊಂಡು ಪಡೆಯಬೇಕಾಗುತ್ತದೆ (ಕುಚ್ ಪಾಕರ್ ಕೋನಾ ಹೈ, ಕುಚ್ ಕೋಕರ್ ಪಾನಾ ಹೈ)” ಎಂದು ಅವರು ತಮ್ಮ ಬೇಡಿಕೆ ಸಮರ್ಥಿಸಿದರು.
ಬಳಿಕ ಹಿರಿಯ ವಕೀಲ ಎ.ಎಂ. ಧರ್ ಅವರಿಂದ ವಾದಮಂಡನೆ ಮಾಡಿದರು. ನೀವು ಯಾವ ಕಾಲೇಜಿನಲ್ಲಿ ಓದುತ್ತಿದ್ದೀರಾ, ಈ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಾ ಎಂದು ಸಿಜೆ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕಾಲೇಜು ನಿಮ್ಮನ್ನು ಪ್ರತಿಬಂಧಿಸಿದೆ ಎಂದು ಹೇಳುತ್ತೀರಾ ಎಂದು ನ್ಯಾ.ಕೃಷ್ಣ ದೀಕ್ಷಿತ್ ಕೇಳಿದ್ದಾರೆ. ಹೌದು ಈ ಅಂಶವನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ ಎಂದು ಅರ್ಜಿದಾರರ ಪರ ವಕೀಲ ಎ.ಎಂ.ಧರ್ ಹೇಳಿದ್ದಾರೆ. ಪಿಯುಸಿ ಎಂದು ಉಲ್ಲೇಖಿಸಿದ್ದೇವೆ, ಕ್ಷಮಿಸಿ, ಹೆಸರನ್ನು ಸೇರಿಸಲು ಅನುಮತಿ ಕೋರುತ್ತೇನೆ. ಬೆಂಗಳೂರಿನಲ್ಲಿ ನಾವು ವಿದ್ಯಾಭ್ಯಾಸ ಮಾಡುತ್ತಿದ್ದೇವೆ ಎಂದು ಎ.ಎಂ. ಧರ್ ಹೇಳಿದ್ದಾರೆ, ಇಂತಹ ಪ್ರಮುಖ ವಿಚಾರಣೆಯಲ್ಲಿ ಹೀಗೆ ಅರ್ಜಿ ಸಲ್ಲಿಸುವುದು ಸೂಕ್ತವೇ ಎಂದು ಅರ್ಜಿದಾರರಿಗೆ ನ್ಯಾ. ಕೃಷ್ಣ ದೀಕ್ಷಿತ್ ಪ್ರಶ್ನೆ ಮಾಡಿದ್ದಾರೆ.
ನಾಳೆ ಈ ಬಗ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸುತ್ತೇವೆ, ಅವಕಾಶ ಕೊಡಿ ಎಂದು ಎ.ಎಂ.ಧರ್ ಹೇಳಿದ್ದಾರೆ. ಅರ್ಜಿ ಹಿಂಪಡೆಯಲು ಅನುಮತಿ ಕೇಳಿದ್ದಾರೆ. ನಾವು ಈಗ ಅರ್ಜಿ ವಜಾಗೊಳಿಸುತ್ತೇವೆ. ಸರಿಯಾದ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತೇವೆ ಎಂದು ಪೀಠ ಹೇಳಿತು.
ಇದಕ್ಕೂ ಮುನ್ನ, ಸಾಮಾಜಿಕ ಕಾರ್ಯಕರ್ತರೊಬ್ಬರ ಪರವಾಗಿ ವಕೀಲ ರಹಮತ್ ಉಲ್ಲಾ ಕೊತ್ವಾಲ್ ಅವರು ವಾದ ಆರಂಭಿಸಿ “ರಾಜ್ಯ ಸರ್ಕಾರದ ನಿಲುವು ಭಾರತ ಅಂಗೀಕರಿಸಿರುವ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಅನುಗುಣವಾಗಿಲ್ಲ ಎಂದು ವಾದಿಸಿದರು.
ಅರ್ಜಿ ಸಲ್ಲಿಸುವಾಗ ಹೈಕೋರ್ಟ್ನ ಸಾರ್ವಜನಿಕ ಹಿತಾಸಕ್ತಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ಪೀಠವು ಕೊತ್ವಾಲ್ ಅವರಿಗೆ ಹೇಳಿತು. “ಇಂಥ ಮಹತ್ವದ ಪ್ರಕರಣ ಇರುವಾಗ ನೀವು ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಿ. ದಾಖಲೆಗಳು ಸರಿಯಾಗಿಲ್ಲ. ಈ ಸಮಯವನ್ನು ನಿಮ್ಮ ಸ್ನೇಹಿತರು ವಾದಕ್ಕೆ ಬಳಸಿಕೊಳ್ಳಬಹುದಿತ್ತು” ಎಂದು ನ್ಯಾ. ದೀಕ್ಷಿತ್ ಅಸಮಾಧಾನ ಹೊರಹಾಕಿದರು.
ಆಗ ಕೊತ್ವಾಲ್ ಅವರು “ಕೆಲವು ಪುಟ ಸಂಖ್ಯೆಯ ವಿಚಾರದಲ್ಲಿ ಸಮಸ್ಯೆ ಇರಬಹುದು. ನಿಯಮ ಪಾಲಿಸಿರುವೆ. ತಾಂತ್ರಿಕ ವಿಚಾರಗಳ ಬಗ್ಗೆ ಹೆಚ್ಚು ಪರಿಶೀಲನೆ ನಡೆಸಬಾರದಾಗಿ ಕೋರುವೆ. ಎರಡು-ಮೂರು ನಿಮಿಷಗಳಲ್ಲಿ ನನ್ನ ವಾದ ಪೂರ್ಣಗೊಳಿಸುವೆ” ಎಂದರು. ಇದಕ್ಕೆ ಪೀಠವು “ನೀವು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. ದಂಡ ವಿಧಿಸಿ ನಿಮ್ಮ ಮನವಿಯನ್ನು ವಜಾ ಮಾಡುತ್ತೇವೆ. ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ, ಮನವಿ ವಜಾ ಮಾಡುತ್ತೇವೆ” ಎಂದಿತು.
ಮಧ್ಯಪ್ರವೇಶ ಕೋರಿರುವ ವಕೀಲ ಸುಭಾಷ್ ಝಾ ಅವರು “ಹಿಜಾಬ್ ಮತ್ತು ಉದ್ದನೆಯ ಗಡ್ಡದ ಕುರಿತು ಹೈಕೋರ್ಟ್ಗಳಲ್ಲಿ ಇದೇ ಮೊದಲ ಬಾರಿಗೆ ವಾದ ನಡೆಯುತ್ತಿಲ್ಲ. ಬಾಂಬೆ ಮತ್ತು ಕೇರಳ ಹೈಕೋರ್ಟ್ಗಳು ಈ ಬಗ್ಗೆ ವಾದ ಆಲಿಸಿ, ಇದು ಇಸ್ಲಾಮ್ನ ಅವಿಭಾಜ್ಯ ಅಂಗವಲ್ಲ ಎಂದು ಹೇಳಿವೆ ಎಂದರು. ಆಗ ಪೀಠವು ಮಧ್ಯಪ್ರವೇಶಗಾರರಿಗೆ ಈಗ ಅವಕಾಶ ನೀಡಲಾಗದು. ಈ ಕುರಿತು ಸೂಕ್ತ ಸಂದರ್ಭದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿತು.
ಮಧ್ಯಸ್ಥಿಕೆಯ ಮೂಲಕ ಪ್ರಕರಣ ಪರಿಹರಿಸುವ ಕುರಿತು ವಕೀಲರೊಬ್ಬರು ಹೇಳಿದಾಗ ಮುಖ್ಯನ್ಯಾಯಮೂರ್ತಿ ರಿತುರಾಜ ಅವಸ್ಥಿ ಅವರು “ಇಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ಈ ರೀತಿಯಾಗಿ ಮಧ್ಯಸ್ಥಿಕೆ ಮಾಡಲಾಗದು. ಇದನ್ನು ಒಪ್ಪಿದ ಉಭಯ ಪಕ್ಷಕಾರರ ನಡುವೆ ಮಾತ್ರ ಸಂಧಾನ ನಡೆಸಬಹುದು ಎಂದರು.
ರಾಜ್ಯ ಸರ್ಕಾರದ ಪರವಾಗಿ ನಾಳೆ, ಶುಕ್ರವಾರ ವಾದ ಮಂಡಿಸುವುದಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಗಳನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರು ನಾವದಗಿ ಅವರ ಬಳಿಕ ವಾದಿಸುವುದಾಗಿ ತಿಳಿಸಿದರು. ವಿಚಾರಣೆ ನಾಳೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ