ಬೆಂಗಳೂರು: ಸಾಮಾಜಿಕ ಹೋರಾಟಗಾರ, ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ ಅವರಿಗೆ ಜಾಮೀನು ಲಭಿಸಿದೆ. ನಟ ಚೇತನ್ ಕುಮಾರ್ ಅವರಿಗೆ 32ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ನಟ ಚೇತನ್ ಹೈಕೋರ್ಟ್ ನ್ಯಾಯಮೂರ್ತಿ ಕುರಿತು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆಂಬ ಕಾರಣಕ್ಕೆ ಅವರನ್ನು ಬಂಧಿಸಿ, 8ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಆ ವೇಳೆ ಕೋರ್ಟ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಈಗ 32 ನೇ ಎಸಿಎಂಎಂ ನ್ಯಾಯಾಲಯದಿಂದ ನಟ ಚೇತನ್ ಅವರಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ.
ಚೇತನ್ಗೆ ಜಾಮೀನು ನೀಡಲು ಕೆಲ ಷರತ್ತುಗಳನ್ನು ಹಾಕಲಾಗಿದೆ. ಒಂದು ಲಕ್ಷ ರೂ. ಬಾಂಡ್ ಕೊಡಬೇಕು. ಇಬ್ಬರ ಶ್ಯೂರಿಟಿ ಬೇಕು. ಪೊಲೀಸರು ನಡೆಸುವ ತನಿಖೆಗೆ ಸಹಕರಿಸಬೇಕು ಎಂದು ಷರತ್ತಿನಲ್ಲಿದೆ. ಇತ್ತೀಚೆಗೆ ಹಿಜಾಬ್ ವಿವಾದ ಸಾಕಷ್ಟು ಸುದ್ದಿಯಾಗಿತ್ತು. ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದ ಚೇತನ್, ಅದರಲ್ಲಿ ಹಿಜಾಬ್ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ, ಹೈಕೋರ್ಟ್ ಜಡ್ಜ್ ಒಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರೆಂಬ ಕಾರಣಕ್ಕೆ ಅವರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ