ಬೆಂಗಳೂರು :ಕರ್ನಾಟಕದ ಬಜೆಟ್ ಅಧಿವೇಶನ ನಾಳೆ, ಮಾರ್ಚ್ ೪ರಿಂದ ಆರಂಭವಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ೪ರಂದು ಮಧ್ಯಾಹ್ನ ೧೨: ೩೦ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ಜನಪರ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವ ಬಜೆಟ್ ಇದಾಗಲಿದೆ ಎಂಬ ನಿರೀಕ್ಷೆಯಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವಾಗ ಬಜೆಟ್ ಮಂಡನೆ ಆಗುತ್ತಿರುವುದರಿಂದ ಸಹಜವಾಗಿಯೇ ಬಜೆಟ್ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ. ಇದು ಭರಪೂರ ಕೊಡುಗೆಗಳ ಬಜೆಟ್ ಆಗಲಿದೆಯೇ ಎಂಬ ಚರ್ಚೆಗಳು ಸಹ ನಡೆಯುತ್ತಿವೆ.
ಕೋವಿಡ್ ಆರ್ಥಿಕ ಸಂಕಷ್ಟದ ಮಧ್ಯೆ ಜನಪ್ರಿಯ ಹಾಗೂ ಜನರಿಗೆ ಹೊರೆಯಾಗದಂತಹ ಬಜೆಟ್ ಮಂಡಿಸುವ ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಕೋವಿಡ್ ಆರ್ಥಿಕ ಸಂಕಷ್ಟ, ರಾಜ್ಯದ ಆದಾಯ ಸಂಗ್ರಹಣೆ ನಿರೀಕ್ಷಿತ ಗುರಿ ಮುಟ್ಟದಿರುವುದು, ಕೇಂದ್ರ ಸರ್ಕಾರದ ಅನುದಾನಗಳು ಹಾಗೂ ಜಿಎಸ್ಟಿ ಪರಿಹಾರಗಳು ಸಕಾಲಕ್ಕೆ ಬಿಡುಗಡೆಯಾಗದಿರುವುದು ಸರ್ಕಾರಕ್ಕೆ ಆರ್ತಿಕ ಸವಾಲುಗಳನ್ನು ತಂದೊಡ್ಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೊಮ್ಮಾಯಿಯವರು ಬಜೆಟ್ ಮಂಡಿಸುತ್ತಿದ್ದಾರೆ.
ಮೊದಲಿನಿಂದಲೂ ರಾಜ್ಯದ ಪ್ರತಿ ಬಜೆಟ್ನಲ್ಲೂ ರೈತಸಮುದಾಯಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಈ ಬಜೆಟ್ನಲ್ಲೂ ಕೃಷಿ ವಲಯ ಹೆಚ್ಚಿನ ನಿರೀಕ್ಷೆ ಹೊಂದಿದೆ.
ಬಜೆಟ್ನಲ್ಲಿ ರಾಜ್ಯದ ಭವಿಷ್ಯಕ್ಕೆ ಹೊಸ ಭಾಷ್ಯ ಬರೆಯುವುದಾಗಿ ಮುಖುಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಅದು ಹೇಗೆ ಎಂಬುದಕ್ಕೆ ನಾಳೆ ತೆರೆ ಬೀಳಲಿದೆ.
ರೈತ ಆದ್ಯತಾ ವಲಯಗಳಾದ ಕೃಷಿ, ಆರೋಗ್ಯ, ಶಿಕ್ಷಣ, ನೀರಾವರಿ, ಲೋಕೋಪಯೋಗಿ. ಸಮಾಜಕಲ್ಯಾಣ, ಕೈಗಾರಿಕೆ, ವಸತಿ, ಗ್ರಾಮೀಣಾಭಿವೃದ್ಧಿಗೆ ಬಜೆಟ್ನಲ್ಲಿ ಒತ್ತು ನೀಡಲು ಬಜೆಟ್ನಲ್ಲಿ ಹೇಗೆ ಹಣಕಾಸು ವಿಂಗಡಣೆ ಮಾಡುತ್ತಾರೆ ಎಂಬುದು ಕೂಡ ಮುಖ್ಯವಾಗಲಿದೆ.
ಈ ಸಲದ ರಾಜ್ಯ ಬಜೆಟ್ನ ಗಾತ್ರ ೨.೬೦ ಲಕ್ಷ ಕೋಟಿ ರೂ.ಗಳನ್ನು ದಾಟಬಹುದು ಎಮದು ಅಂದಾಜಿಸಲಾಗಿದೆ. ಕಳೆದ ಬಾರಿ ಬಜೆಟ್ನ ಗಾತ್ರ ೨.೪೬ ಲಕ್ಷ ಕೋಟಿ ರೂ.ಗಳಿತ್ತು. ಬಜೆಟ್ಗೆ ಅಂತಿಮ ರೂಪ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಹಲವು ದಿನಗಳಿಂದ ಸಭೆಗಳನ್ನು ನಡೆಸಿದ್ದಾರೆ.
ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಘೋಷಣೆ. ಮುಂಬೈ, ಬೆಂಗಳೂರು, ಚೆನ್ನೈ, ಕೈಗಾರಿಕಾ ಕಾರಿಡಾರ್ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸುವ ಸಾಧ್ಯತೆಗಳಿದ್ದು, ವಿದೇಶದಲ್ಲಿರುವ ಪ್ರತಿಭಾವಂತರನ್ನು ಕರೆತರುವ ನಿಟ್ಟಿನಲ್ಲಿ ಮರಳಿ ತಾಯ್ನಾಡಿಗೆ ಎಂಬ ಯೋಜನೆ ಘೋಷಿಸುವ ಸಾಧ್ಯತೆಗಳಿವೆ.
ನಿಮ್ಮ ಕಾಮೆಂಟ್ ಬರೆಯಿರಿ