ನವದೆಹಲಿ: ಶಿವಸೇನೆ ನಾಯಕರು ಹಾಗೂ ಮಹಾರಾಷ್ಟ್ರದ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅನಿಲ್ ಪರಬ್ ಅವರ ಆಪ್ತ ಸಹಾಯಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ದಾಳಿ ನಡೆಸಿದೆ. ಮುಂಬೈ ಮತ್ತು ಪುಣೆಯಲ್ಲಿ ದಾಳಿ ನಡೆಸಲಾಗಿದೆ.
ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ನ ಟ್ರಸ್ಟಿ ರಾಹುಲ್ ಕನಾಲ್ ದಾಳಿಯಾದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರ ನಿಕಟ ಸಹಾಯಕರಾಗಿದ್ದಾರೆ. ಐಟಿ ದಾಳಿಗಳನ್ನು ಎದುರಿಸಿದವರಲ್ಲಿ ಶಿವಸೇನೆಯ ಹಿರಿಯ ನಾಯಕ ರಾಮದಾಸ್ ಕದಂ ಅವರ ಸಹೋದರ ಸದಾನಂದ ಕದಂ, ಸಂಜಯ್ ಕದಂ ಮತ್ತು ಸರ್ಕಾರಿ ಅಧಿಕಾರಿ ಸೇರಿದ್ದಾರೆ.
ಇದಕ್ಕೂ ಮುನ್ನ ಐಟಿ ಇಲಾಖೆಯು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಂಪರ್ಕದಾರರು ಮತ್ತು ಶಿವಸೇನಾ ಮುಖಂಡರ ಕಚೇರಿಗಳು ಮತ್ತು ಆವರಣಗಳಲ್ಲಿ ದಾಳಿ ನಡೆಸಿತ್ತು.
ಈ ದಾಳಿಗಳು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿ, ಶಿವಸೇನೆ ನಾಯಕ ಸಂಜಯ್ ರಾವತ್ ಆದಾಯ ತೆರಿಗೆ ಇಲಾಖೆ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಏಜೆನ್ಸಿಗಳು ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಂದ ಆಯ್ದ ಕೆಲವರನ್ನು ಏಕೆ ಗುರಿಯಾಗಿಸಿಕೊಂಡಿವೆ. ಇದು ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರದ ಮೇಲೆ ಒತ್ತಡ ಹೇರುವ ಮತ್ತು ಅಸ್ಥಿರಗೊಳಿಸುವ ತಂತ್ರವಾಗಿದೆ” ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ