ಬೆಂಗಳೂರು: ಹಿಜಾಬ್ ವಿವಾದ ಕುರಿತಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ತೀರ್ಪನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದಾರೆ.
ತಿಲಕ, ವಿಭೂತಿ ಅಲಂಕಾರಿಕ ವಸ್ತುವಲ್ಲ, ಭಕ್ತಿಯ ಸಂಕೇತ. ನಾಳೆ ಜೀನ್ಸ್, ಬೇರೆ ಉಡುಪಿನ ಬಗ್ಗೆಯೂ ಚರ್ಚೆಯಾಗಬಹುದು. ನೋಡೋಣ ಈ ವಿಚಾರದ ಬಗ್ಗೆ ನಮ್ಮ ಸಮಾಜದ ಮುಖಂಡರು ತೀರ್ಮಾನಿಸುತ್ತಾರೆ. ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಕೋರ್ಟಿಗೆ ಹೋಗಲು ಅವಕಾಶವಿದೆ. ಆದರೆ ಲಾಯರ್ ಮಜೀದ್ ಮೆಮನ್ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡುತ್ತಿದ್ದೇವೆ ಎಂದು ಇಬ್ರಾಹಿಂ ಹೇಳಿದರು.
ಹಿಜಾಬ್ ಬಗ್ಗೆ ಹೈಕೋರ್ಟ್ ಪ್ರಶ್ನಿಸಿ ನಾವು ಸುಪ್ರೀಂಗೆ ಹೋಗುತ್ತೇವೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ದೇಶವನ್ನ ಪ್ರಗತಿಪರವಾಗಿ ಕಟ್ಟಬೇಕು. ದೇಶದ ಐಕ್ಯತೆಗೆ ಇವತ್ತು ಧಕ್ಕೆ ಬಂದಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ ಕೆಲಸವಾಗುತ್ತಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ