ನವದೆಹಲಿ: ಎಲ್ಲೆಡೆ ಹಿಟ್ ಆಗಿರುವ ಹಾಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ ಅಗ್ನಿಹೋತ್ರಿ (Vivek Agnihotri) ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ವರದಿ ಮಾಡಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರದಲ್ಲಿ ತೋರಿಸಲಾದ ದೃಶ್ಯಗಳ ಬಗ್ಗೆ ಕೆಲವರಿಂದ ತಕರಾರು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಕೆಟಗರಿ ಭದ್ರತೆ (Y category security) ನೀಡಲಾಗುತ್ತಿದೆ. ಅಭಿಷೇಕ್ ಅಗರ್ವಾಲ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪುನೀತ್ ಇಸ್ಸಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಈ ಚಲನಚಿತ್ರದಲ್ಲಿ ನಟಿಸಿದ್ದಾರೆ.
ಕಳೆದ ವಾರ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನ ಕಂಡ ನಂತರ ಅಗ್ನಿಹೋತ್ರಿ ಸುದ್ದಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ವೈ ಕ್ಯಾಟಗರಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಹೇಳಲಾಗಿದೆ. ಈ ಸಿನೆಮಾಕ್ಕೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿ ಘೋಷಣೆ ಮಾಡಲಾಗಿದೆ.
ವೈ-ಕೆಟಗರಿ ಭದ್ರತೆಯಡಿಯಲ್ಲಿ, ಅಗ್ನಿಹೋತ್ರಿ ಅವರಿಗೆ ಎಂಟು ಅಧಿಕಾರಿಗಳ ಭದ್ರತೆಯನ್ನು ಒದಗಿಸಲಾಗುವುದು, ಇದರಲ್ಲಿ ಇಬ್ಬರು ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಇರಲಿದ್ದಾರೆ.
ಕಾಶ್ಮೀರ ಫೈಲ್ಸ್ ಕಾಶ್ಮೀರಿ ಪಂಡಿತರು ಅನುಭವಿಸಿದ ಕ್ರೌರ್ಯಗಳನ್ನು ಮತ್ತು 1990 ರ ದಶಕದಲ್ಲಿ ಕಣಿವೆಯಿಂದ ಸಮುದಾಯದ ಸಾಮೂಹಿಕ ವಲಸೆ ಬಗ್ಗೆ ವಿವರಿಸುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ