ಪ್ರತಿ ತಾಲೂಕಿನಲ್ಲಿ ವಿವಿಧೋದ್ದೇಶಗಳ ಮಹಿಳಾ ಸಹಕಾರಿ ಸಂಘಗಳು ಆರಂಭ, ಸರ್ಕಾರದಿಂದಲೇ ಶೇ.90 ರಷ್ಟು ಷೇರು ಬಂಡವಾಳ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ವಿವಿಧೋದ್ದೇಶಗಳ ಮಹಿಳಾ ಸಹಕಾರಿ ಸಂಘಗಳನ್ನು ಸರ್ಕಾರದ ಶೇ. 90 ರಷ್ಟು ಷೇರು ಬಂಡವಾಳದೊಂದಿಗೆ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು, ಭಾನುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ, ಬೆಂಗಳೂರು – ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಲ ನಿಯಮಿತ, ಬೆಂಗಳೂರು ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸಹಕಾರ ರಂಗದ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗುವಂತೆ ಉತ್ತೇಜಿಸಲು ಸದಸ್ಯತ್ವ ಶುಲ್ಕವನ್ನು ಸರ್ಕಾರದಿಂದ ಪಾವತಿಸಲಾಗುವುದು. ದುಡಿಯುವ ವರ್ಗ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಸಹಕಾರಿ ರಂಗ ಯಶಸ್ವಿಯಾಗಲು ಸಾಧ್ಯ. ಮಹಿಳೆಯರು ದುಡಿಮೆಯ ಕ್ಷಮತೆಯುಳ್ಳವರು, ಅವರಿಂದ ರಾಜ್ಯದ ತಲಾವಾರು ಆದಾಯ ಹೆಚ್ಚಾಗುತ್ತದೆ, ಜೊತೆ ರಾಜ್ಯದ ಆರ್ಥಿಕತೆಯೂ ಹೆಚ್ಚುತ್ತದೆ. ಸಹಕಾರಿ ಕ್ಷೇತ್ರದಿಂದ ಔದ್ಯೋಗಿಕ ಕ್ರಾಂತಿಯನ್ನು ಮಾಡಬಹುದು ಎಂದರು.

ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ಶೀಘ್ರ ಕಾರ್ಯಾದೇಶ
ಕರ್ನಾಟಕದಲ್ಲಿ ಹಾಲು ಉತ್ಪಾದನೆ ಸಹಕಾರ ಸಂಘಗಳ ವಾರ್ಷಿಕ ಆದಾಯ 3600 ಕೋಟಿ ರೂ.ಗಳಷ್ಟಿದೆ. ಪತಿ ತಿಂಗಳು 300 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹಾಲು ಉತ್ಪಾದಕ ಸಂಘಗಳು ಪಾವತಿ ಮಾಡುತ್ತಾರೆ. ಉತ್ಪಾದನೆಯ ಲಾಭ ಹಾಲು ಉತ್ಪಾದಕರಿಗೆ ಹೋಗಬೇಕೆನ್ನುವ ದೃಷ್ಟಿಯಿಂದ ಹಾಲು ಉತ್ಪಾದಕರ ಬ್ಯಾಂಕ್ ಸ್ಥಾಪನೆ ಮಾಡಲು ಸರ್ಕಾರ ಬಜೆಟ್ ನಲ್ಲಿ 100 ಕೋಟಿ ರೂ.ಗಳನ್ನು ನೀಡಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ ಮಾಡಿದೆ. ಶೀಘ್ರವೇ ಕಾರ್ಯಾದೇಶ ಮಾಡಲಿದೆ. ಪ್ರತಿ ತಾಲೂಕಿನಲ್ಲಿ ಬ್ಯಾಂಕ್ ಇರಲಿದ್ದು, ಸುಲಭದಲ್ಲಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ ಎಂದರು.
ಈ ವರ್ಷ 33 ಲಕ್ಷ ರೈತರಿಗೆ ಸಾಲ ನೀಡುವ ಗುರಿಯಿದ್ದು ಇದರ ಶ್ರೇಯಸ್ಸು ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಸೇರಬೇಕು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement