ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಸಾವು

ಮುಂಬೈ: 2021 ರ ಮುಂಬೈ ಕ್ರೂಸ್ ಡ್ರಗ್ ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ಮಹುಲ್ ಪ್ರದೇಶದಲ್ಲಿನ ಅವರ ಬಾಡಿಗೆ ಅಪಾರ್ಟ್ಮೆಂಟಿಲ್ಲಿ ನಿಧನರಾಗಿದ್ದಾರೆ.
ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ತುಷಾರ್ ಖಂಡಾರೆ, ಸೈಲ್ ಅವರು ಸಾವನ್ನು ದೃಢಪಡಿಸಿದ್ದಾರೆ ಮತ್ತು ಸೈಲ್ ಅವರು ಮನೆಯಲ್ಲಿದ್ದರು ಮತ್ತು ಅವರ ಸಾವಿನ ಹಿಂದೆ ಕುಟುಂಬವು ಯಾವುದೇ ದುಷ್ಕೃತ್ಯವನ್ನು ಅನುಮಾನಿಸುವುದಿಲ್ಲ ಎಂದು ಹೇಳಿದರು.

ಸೈಲ್ ಅವರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 2021ರ ಅಕ್ಟೋಬರ್ 3ರಂದು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ತನಿಖಾಧಿಕಾರಿಗಳು ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಸುಮಾರು 20 ಜನರನ್ನು ಬಂಧಿಸಿದ್ದರು. ಪ್ರಕರಣದ ವೇಳೆ ಪ್ರಭಾಕರ್​ ಸೈಲ್​ ಕೂಡಾ ಬೆಳಕಿಗೆ ಬಂದಿದ್ದರು. ಪ್ರಭಾಕರ್ ಸೈಲ್ ಅವರು ಡ್ರಗ್ಸ್‌ ಪ್ರಕರಣದ ಮತ್ತೊಬ್ಬ ಪ್ರಮುಖ ಸಾಕ್ಷಿ ಕೆ.ಪಿ.ಗೋಸಾವಿ ಅವರ ಅಂಗರಕ್ಷಕರಾಗಿದ್ದರು. ಪ್ರಭಾಕರ್ ಸೈಲ್ ಅವರು ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

ಎನ್‌ಸಿಬಿ ದಾಳಿ ನಡೆಸಿದ ಸ್ಥಳದಲ್ಲಿ ಮತ್ತು ಎನ್‌ಸಿಬಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದ ಗೋಸಾವಿ, ಶಾರುಕ್‌ ಪುತ್ರ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಫೋಟೊ ಮತ್ತು ವಿಡಿಯೊ ತೆಗೆದಿದ್ದರು. ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ತಾನು ಸ್ವತಂತ್ರ ತನಿಖಾಧಿಕಾರಿ ಎಂದು ಗೋಸಾವಿ ಹೇಳಿಕೊಂಡಿದ್ದರು. ಆದರೆ, ಎನ್‌ಸಿಬಿ ಅವರನ್ನು ಡ್ರಗ್ಸ್‌ ಪ್ರಕರಣದಲ್ಲಿ ‘ಸ್ವತಂತ್ರ ಸಾಕ್ಷಿ’ ಎಂದು ಪರಿಗಣಿಸಿತ್ತು. ಆರ್ಯನ್‌ ಖಾನ್‌ ಬಿಡುಗಡೆಗೆ ಎನ್‌ಸಿಬಿಯ ಅಧಿಕಾರಿಯೊಬ್ಬರು ಮತ್ತು ಕೆ.ಪಿ.ಗೋಸಾವಿ ಸಹಿತ ಇತರ ವ್ಯಕ್ತಿಗಳು ₹25 ಕೋಟಿ ಲಂಚ ಕೇಳಿದ್ದರು. ಇದರಲ್ಲಿ ₹8 ಕೋಟಿ ಹಣವನ್ನು ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ನೀಡಬೇಕೆಂದು ಗೋಸಾವಿ ಹೇಳಿದ್ದ ಟೆಲಿಫೋನ್‌ ಸಂಭಾಚಣೆ ಕೇಳಿರುವುದಾಗಿ ಪ್ರಭಾಕರ್ ಸೈಲ್ ಆರೋಪಿಸಿದ್ದರು. ಸೈಲ್ ಮಾಡಿದ್ದ ಆರೋಪಗಳನ್ನು ಸಮೀರ್ ವಾಂಖೆಡೆ ನಿರಾಕರಿಸಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement