ಬೆಂಗಳೂರು: ಆಜಾನ್ಗೆ ಮಾತ್ರ ಶಬ್ದ ಮಿತಿಯಲ್ಲ, ಬಸ್ ಸೌಂಡಿಗೂ ಇದೆ, ಶಬ್ದ ಮಾಲಿನ್ಯ ಬಗ್ಗೆ ಕೋರ್ಟ್ ಆದೇಶ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ತಿಳಿಸಿದರು. ಕೋರ್ಟ್ ಆದೇಶ ಪಾಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾನೂನು ಎಲ್ಲರಿಗೂ ಅನ್ವಯ. ಶಬ್ದದ ಮಿತಿ ಬಗ್ಗೆ, ಮೈಕ್ಗಳ ಬಳಕೆ ಬಗ್ಗೆ ಹಾಗೂ ಕೋರ್ಟ್ ಆದೇಶ ಬಗ್ಗೆ ಮಸೀದಿ, ದೇವಸ್ಥಾನ ಎಲ್ಲದಕ್ಕೂ ತಿಳಿಸಲು ಸೂಚಿಸಿದ್ದೇವೆ, ಹೈಕೋರ್ಟ್ ಆದೇಶ ಮಾನ್ಯ ಮಾಡಿ ಪಾಲಿಸಿದರೆ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬಹುದು, ಯಾವುದೇ ಕಾರಣಕ್ಕೂ ಘರ್ಷಣೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಅವರ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣವೇ ಈ ಗೊಂದಲ, ಗಲಾಟೆ-ಗದ್ದಲಗಳಿಗೆ ಕಾರಣ, ಈ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತ ಬಂದಿದೆ. ವೋಟ್ ಬ್ಯಾಂಕ್ನಿಂದ ಅವರು ಸಿಂಹಾಸನದ ಮೇಲೆ ಕೂತಿದ್ದಾರೆ, ಅವರಿಗೆ ಎಲ್ಲಿ ಅಧಿಕಾರ ಕೈಜಾರಿ ಹೋಗುತ್ತದೆಯೋ ಎನ್ನುವ ಭಯವಿದೆ. ಹಿಜಾಬ್ ಬಗ್ಗೆ ಗಟ್ಟಿತನದಿಂದ ಕಾಂಗ್ರೆಸ್ ನಾಯಕರು ಮಾತನಾಡುತ್ತಿಲ್ಲ. ಡಿಕೆ ಶಿವಕುಮಾರ್ ಇದರ ಬಗ್ಗೆ ಮಾತಾಡಬೇಡಿ ಎಂದು ಹೇಳುತ್ತಾರೆ. ಕಾಂಗ್ರೆಸ್ಗೆ ವೋಟ್ ಬ್ಯಾಂಕ್ ಸ್ವಲ್ಪ ಅಲುಗಾಡಿದರೂ ಒತ್ತಡ ಆಗಿಬಿಡುತ್ತದೆ ಎಂದು ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ