ನವದೆಹಲಿ: ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ಭಾರತ ಘಟಕದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ಅವರಿಗೆ ತನ್ನ ಅನುಮತಿಯಿಲ್ಲದೆ ದೇಶವನ್ನು ತೊರೆಯದಂತೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಅಲ್ಲದೆ, ಸಿಬಿಐ ನಿರ್ದೇಶಕರು ಆಕಾರ್ ಪಟೇಲ್ ಅವರಿಗೆ ಕ್ಷಮಾಪಣೆ ಪತ್ರ ಬರೆಯಬೇಕು ಎಂದು ಸೂಚಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಅವರ ಆದೇಶಕ್ಕೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸ್ನೇಹಿ ಮನ್ ಅವರು ತಡೆಯಾಜ್ಞೆ ನೀಡಿದ್ದಾರೆ.
ಆಕಾರ್ ಪಟೇಲ್ ಅವರ ವಿರುದ್ಧ ಹೊರಡಿಸಲಾಗಿದ್ದ ಲುಕ್ಔಟ್ ಸುತ್ತೋಲೆಯನ್ನು ಎಸಿಎಂಎಂ ನ್ಯಾಯಾಧೀಶರು ಗುರುವಾರ ಬದಿಗೆ ಸರಿಸಿದ್ದರು. ಇದರ ವಿರುದ್ಧ ಸಿಬಿಐ ದಾಖಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಡೆಸಿತು.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾರ್ ಪಟೇಲ್ ವಿರುದ್ಧ ಹೊರಡಿಸಲಾದ ಲುಕ್ ಔಟ್ ಸುತ್ತೋಲೆ ಹಿಂಪಡೆಯುವ ಸಿಬಿಐ ಕೋರ್ಟ್ ನಿರ್ದೇಶನಕ್ಕೆ ನ್ಯಾಯಾಲಯ ತಡೆ ನೀಡಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಪರಿಷ್ಕರಣೆಗಾಗಿ ಸಿಬಿಐ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಸಂತೋಷ್ ಸ್ನೇಹಿ ಮಾನ್ ಈ ಆದೇಶ ಪ್ರಕಟಿಸಿದ್ದಾರೆ. ಸಿಬಿಐ ಪರಿಷ್ಕರಣೆ ಅರ್ಜಿಗೆ ಪ್ರತಿಕ್ರಿಯೆ ನೀಡಲು ಆಕಾರ್ ಪಟೇಲ್ ಗೆ ಅವಕಾಶ ನೀಡುವುದು ಅಗತ್ಯವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ವಿಚಾರಣೆ ವೇಳೆ ಆಕಾರ್ ಪಟೇಲ್ ದೇಶದಿಂದ ತೊರೆಯಲು ಯತ್ನಿಸಿದನ್ನು ಸಿಬಿಐ ಪರ ವಕೀಲ ನಿಕಿಲ್ ಗೋಯೆಲ್ ನ್ಯಾಯಾಧೀಶರ ಗಮನಕ್ಕೆ ತಂದರು. ಲಿಖಿತ ಕ್ಷಮೆಯಾಚನೆಗೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕರಿಗೆ ವಿಚಾರಣಾ ನ್ಯಾಯಾಲಯವು ಗುರುವಾರ ನೀಡಿದ ಆದೇಶಕ್ಕೆ ತಡೆ ನೀಡಿತು.
ಕೋರ್ಟ್ ಅನುಮತಿ ಇಲ್ಲದೆ ಆಕಾರ್ ಪಟೇಲ್ ದೇಶ ತೊರೆಯಬಾರದು ಎಂದು ಆದೇಶದಲ್ಲಿ ಹೇಳಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಏಪ್ರಿಲ್ 12ಕ್ಕೆ ಮುಂದೂಡಿತು.
ಪಟೇಲ್ ಅವರನ್ನು ಏಪ್ರಿಲ್ 6ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕಕ್ಕೆ ಹೋಗುವುದರಿಂದ ತಡೆಯಲಾಗಿತ್ತು. ಇದರ ವಿರುದ್ಧ ಅವರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ