ಲಕ್ನೋ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಗೆಲುವಿನ ನಂತರ ಈಗ ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಗಳಲ್ಲಿ, ದಾಖಲೆಯ ಗೆಲುವು ದಾಖಲಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ವಾರಣಾಸಿಯಲ್ಲಿ ಪಕ್ಷವು ಸೋತಿದೆ.
ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಒಟ್ಟು 36 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ 33 ಸ್ಥಾನಗಳನ್ನು ಗೆದ್ದಿದೆ. ಆದಾಗ್ಯೂ, ಪಕ್ಷವು ವಾರಣಾಸಿಯ ಪ್ರಮುಖ ಹಾಗೂ ಮಹತ್ವದ ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿ ಅನ್ನಪೂರ್ಣ ಸಿಂಗ್ ಅವರಿಗೆ ಕಳೆದುಕೊಂಡಿತು. ಅವರು ಬಿಜೆಪಿ ಅಭ್ಯರ್ಥಿ ಸುದಾಮ ಪಟೇಲ್ ಅವರನ್ನು 4,060 ಮತಗಳ ಅಂತರದಿಂದ ಸೋಲಿಸಿದರು. ಅಜಂಗಢ ಮತ್ತು ಪ್ರತಾಪಗಢ ಕ್ಷೇತ್ರಗಳಲ್ಲಿಯೂ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಮೇಲ್ಮನೆ ಚುನಾವಣೆಯಲ್ಲಿ 9 ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯೂ ಸೇರಿದಂತೆ ಬಿಜೆಪಿ ಒಟ್ಟು 36 ಸ್ಥಾನಗಳಲ್ಲಿ 33 ಸ್ಥಾನಗಳನ್ನು ಗೆಲುವು ಸಾಧಿಸಿತು.
ಅಜಂಗಢ, ವಾರಣಾಸಿ, ಪ್ರತಾಪಗಢದಲ್ಲಿ ಸ್ವತಂತ್ರ ಅಭ್ಯರ್ಥಿಗಳು 3 ಸ್ಥಾನಗಳನ್ನು ಗೆದ್ದಿದ್ದಾರೆ. ಅಖಿಲೇಶ್ ಯಾದವ್ ನೇತೃತ್ವದ ಪ್ರತಿಪಕ್ಷ ಸಮಾಜವಾದಿ ಪಕ್ಷವು ಎಲ್ಲಾ ಸ್ಥಾನಗಳನ್ನು ಕಳೆದುಕೊಂಡು ಶೂನ್ಯ ಫಲಿತಾಂಶ ಗಳಿಸಿದೆ. ಅದರ ಗಮನಾರ್ಹ ಅಭ್ಯರ್ಥಿಗಳಲ್ಲಿ ಗೋರಖ್ಪುರ ಮೂಲದ ಮಕ್ಕಳ ತಜ್ಞ ಕಫೀಲ್ ಖಾನ್ ಅವರು ಡಿಯೋರಿಯಾ-ಕುಶಿನಗರ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಕಫೀಲ್ ಖಾನ್ ಅವರು ಗೋರಖ್ಪುರದ ಬಾಬಾ ರಾಘವ್ ದಾಸ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥರಾಗಿದ್ದರು, ಅಲ್ಲಿ ಆಗಸ್ಟ್ 2017 ರಲ್ಲಿ ಆಮ್ಲಜನಕದ ಕೊರತೆಯಿಂದ 63 ಮಕ್ಕಳು ಮೃತಪಟ್ಟಿದ್ದರು. ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಆರೋಪದ ಮೇಲೆ ಅವರನ್ನು ಒಂಬತ್ತು ತಿಂಗಳ ಕಾಲ ಅಮಾನತುಗೊಳಿಸಲಾಯಿತು ಮತ್ತು ಜೈಲಿನಲ್ಲಿರಿಸಲಾಯಿತು. ಅವರು ಈಗ ಚುನಾವಣೆಯಲ್ಲಿಯೂ ಸೋಲನುಭವಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಯಶಸ್ವಿ ಅಭ್ಯರ್ಥಿಗಳನ್ನು ಅಭಿನಂದಿಸಿದರು ಮತ್ತು ಪಕ್ಷದ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿ ವರ್ಚಸ್ಸು ಕಾರಣ ಎಂದು ಹೇಳಿದ್ದಾರೆ.
ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿಯ ಅಮೋಘ ಗೆಲುವು ರಾಜ್ಯದ ಜನರು ಗೌರವಾನ್ವಿತ ಪ್ರಧಾನಿಯವರ ಸಮರ್ಥ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಉತ್ತಮ ಆಡಳಿತದೊಂದಿಗೆ ಇದ್ದಾರೆ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ” ಎಂದು ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ