ಉಡುಪಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ ಪಾಟೀಲ ಅನುಮಾನಸ್ಪಾದವಾಗಿ ಸಾವಗೀಡಾದ ಘಟನೆಗೆ ಸಂಬಂಧಿಸಿದ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂವರು ಆರೋಪಿಗಳ ಬಂಧನ ಆಗುವವರೆಗೆ ಮೃತದೇಹವನ್ನು ತೆಗೆಯುವುದಿಲ್ಲ ಎಂದು ಸಂತೋಷ್ ಕುಟುಂಬಸ್ಥರು ಪಟ್ಟು ಹಿಡಿದ್ದಾರೆ.
ಪಂಚನಾಮೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಶಾಂಭವಿ ಲಾಡ್ಜ್ ನಿಂದ ಕುಟುಂಬಸ್ಥರು ಹೊರಬಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ, ಮೃತ ಸಂತೋಷ ಪಾಟೀಲ ಸಹೋದರ ಪ್ರಶಾಂತ ಪಾಟೀಲ ಅವರು, ನಾವು ಪೊಲೀಸರ ಈತನಕದ ಎಲ್ಲಾ ತನಿಖೆಗೆ ಸಹಕಾರ ಕೊಟ್ಟಿದ್ದೇವೆ. ಪ್ರಕರಣದ ಆರೋಪಿಗಳಾದ ಸಚಿವ ಕೆ.ಎಸ್ ಈಶ್ವರಪ್ಪ, ಬಸವರಾಜ, ರಮೇಶ್ ಈ ಮೂವರ ಬಂಧನದ ಬಳಿಕವೇ ನನ್ನ ಸಂತೋಷ ಪಾಟೀಲ ಮೃತದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ಆಗುವ ಮೊದಲು ಆರೋಪಿಗಳ ಬಂಧನ ಆಗಬೇಕು. ಈ ಕಾರಣದಿಂದ ಉಡುಪಿಯ ಶಾಂಭವಿ ಲಾಡ್ಜ್ ನಿಂದ ಮೃತದೇಹವನ್ನು ಮಣಿಪಾಲಕ್ಕೆ ರವಾನೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಸರ್ಕಾರಕ್ಕೆ ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ನೀಡಿದ್ದೇವೆ. ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸಂತೋಷ ಆತ್ಮಕ್ಕೆ ಶಾಂತಿಗಾಗಿ ನಾವು ಈ ನಿರ್ಧಾರ ಮಾಡಿದ್ದೇವೆ. ನಮಗೆ ನ್ಯಾಯ ಸಿಗಬೇಕು. ಪೊಲೀಸ್ ಇಲಾಖೆಯವರು ಕೂಡ ನಮಗೆ ಸಹಕಾರ ಕೊಟ್ಟು, ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ