ಸಿ ವರ್ಗದ ದೇಗುಲಗಳ ತಸ್ತಿಕ್‌ ಮೊತ್ತ 60 ಸಾವಿರ ರೂ.ಗೆ ಹೆಚ್ಚಳ, ಉಚಿತ ಸಾಮೂಹಿಕ ವಿವಾಹ-ಸಪ್ತಪದಿ ಮರಚಾಲನೆಗೆ ಆದೇಶ

ಬೆಂಗಳೂರು: ತಸ್ತಿಕ್‌ ಮೊತ್ತವನ್ನು 48 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿಗೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ.
ಸಿ ವರ್ಗದ ದೇಗುಲಗಳಲ್ಲಿ ಪ್ರಸ್ತುತ ತಸ್ತಿಕ್‌ ಮೊತ್ತ 48 ಸಾವಿರ ಇತ್ತು. ಈಗ 60 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ನೀಡಿದೆ. ಪ್ರಸಕ್ತ ಆರ್ಥಿಕ ವರ್ಷದಿಂದಲೇ ಹೆಚ್ಚಳ ಆದೇಶ ಅನ್ವಯವಾಗಲಿದೆ.
ಅಷ್ಟೇ ಅಲ್ಲದೆ, ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ “ಉಚಿತ ಸಾಮೂಹಿಕ ವಿವಾಹ – ಸಪ್ತಪದಿ” ಕಾರ್ಯಕ್ರಮವನ್ನು ಮರುಚಾಲನೆಗೊಳಿಸಲು ಆದೇಶ ಮಾಡಲಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ ಉಚಿತ “ಸಪ್ತಪದಿ ಸಾಮೂಹಿಕ ವಿವಾಹ” ಯೋಜನೆಯನ್ನು ಪ್ರಾರಂಭಿಸಿತ್ತು. ವಧು ಮತ್ತು ವರನಿಗೆ ಉಡುಗೆ, ಬಂಗಾರದ ಉಡುಗೊರೆ ನೀಡುವ ಜೊತೆಗೆ, ಎರಡೂ ಕಡೆಯ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯ ಆಡಳಿತ ಮಂಡಳಿಗಳೇ ಮಾಡುವುದು ಈ ಯೋಜನೆಯ ವಿಶೇಷವಾಗಿದೆ.
ಕೊವಿಡ್‌ 19 ಸಾಂಕ್ರಾಮಿಕದ ಹಿನ್ನಲೆಯಲ್ಲಿ ಸುಮಾರು ಎರಡು ವರ್ಷಗಳಿಂದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಈಗ ಕೊವಿಡ್‌ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ, ಮತ್ತೆ ಸಾಮೂಹಿಕ ವಿವಾಹವನ್ನು ಪ್ರಾರಂಭಿಸುವಂತೆ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಏಪ್ರಿಲ್‌ ಮತ್ತು ಮೇ, 2022ರ ಆಯ್ದ ಎ ದರ್ಜೆಯ ದೇವಸ್ಥಾನಗಳಲ್ಲಿ, ಕೊವಿಡ್‌ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಉಚಿತ ಸಾಮೂಹಿಕ ವಿವಾಹ ಸಪ್ತಪದಿ ಕಾರ್ಯಕ್ರಮ – ನಡೆಸಲು ಅದೇಶಿಸಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಕರ್ನಾಟಕ ಸಪ್ತಪದಿ ವಿವಾಹ ಯೋಜನೆಗೆ ಅರ್ಹತೆ…
ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ಮತ್ತು ಕಾನೂನುಬದ್ಧ ನಿವಾಸಿಗಳಾಗಿರಬೇಕು.ಆಯ್ದ ದೇವಸ್ಥಾನಗಳಲ್ಲಿ ಮಾತ್ರ ಮದುವೆ ನಡೆಯಲಿದೆ ಹಾಗೂ
ವಧು ಮತ್ತು ವರನ ಪೋಷಕರು ಇಬ್ಬರೂ ಸಮಾರಂಭದಲ್ಲಿ ಹಾಜರಿದ್ದರೆ ಮಾತ್ರ ಮದುವೆ ನಡೆಯಲಿದೆ. ಪ್ರೇಮ ವಿವಾಹ ಮಾಡಿಕೊಳ್ಳುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.

ಸಪ್ತಪದಿ ವಿವಾಹ ಯೋಜನೆ 2022 ನೋಂದಣಿ…
ಈ ಯೋಜನೆಯಡಿ ಮದುವೆಯಾಗಬಯಸುವವರು ಕರ್ನಾಟಕ ಸಪ್ತಪದಿ ವಿವಾಹ ಯೋಜನೆ 2022 ಕ್ಕೆ ದೇವಸ್ಥಾನಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ಜೋಡಿಗಳು ಮದುವೆಯ ನಿಗದಿತ ದಿನಾಂಕಕ್ಕಿಂತ 30 ದಿನಗಳ ಮೊದಲು ದೇವಸ್ಥಾನದಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ಅರ್ಹ ದಂಪತಿ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಜೋಡಿ ಮಾತ್ರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಬಹುದು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement