ಗಣೇಶಗುಡಿ: ರಿವರ್ ರ‍್ಯಾಫ್ಟಿಂಗ್ ವೇಳೆ ಕಾಳಿ ನದಿಯಲ್ಲಿ ಅಪಾಯಕ್ಕೆ ಸಿಲುಕಿದ ಬೋಟ್: ಕೂದಲೆಳೆ ಅಂತರದಲ್ಲಿ ಬಚಾವಾದ 12 ಮಂದಿ…ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ಪ್ರವಾಸಿಗರನ್ನು ರಿವರ್  ರ್‍ಯಾಫ್ಟಿಂಗ್‌ಗೆ ಕರೆದೊಯ್ಯುತ್ತಿದ್ದ ದೋಣಿ ಮುಳುಗಡೆ ಹಂತ ತಲುಪಿದ ಪರಿಣಾಮ ನೀರಿನಲ್ಲಿ ಸಿಲುಕಿದ್ದ 12 ಮಂದಿಯನ್ನು ರಕ್ಷಿಸಲಾಗಿದೆ. ಆ ಮೂಲಕ ಸಂಭಾವ್ಯ ಅಪಾಯವೊಂದು ಕೆಲವೇ ನಿಮಿಷಗಳ ಅಂತರದಲ್ಲಿ ತಪ್ಪಿದಂತಾಗಿದೆ.

ಗಣೇಶಗುಡಿಯ ಕಾಳಿ ನದಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ವಲ್ಪದರಲ್ಲೇ 12 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲೇ ಇದ್ದ ಪ್ರವಾಸಿಗರ ಸಮಯಪ್ರಜ್ಞೆ ಹಾಗೂ ನಿರ್ವಾಹಕರ ರಕ್ಷಣಾ ಕಾರ್ಯದಿಂದ 12 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಕೂಡ್ರಿಸಿಕೊಂಡು ದೋಣಿಯಲ್ಲಿ ಕರೆದೊಯ್ದಿರುವುದೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ರಬ್ಬರ್ ಬೋಟುನಲ್ಲಿ 6 ಕ್ಕಿಂತ ಹೆಚ್ಚು ಜನರು ರಿವರ್ ರ‍್ಯಾಫ್ಟಿಂಗ್‌ ಮಾಡುವಂತಿಲ್ಲ. ಆದರೆ, 12 ಜನ ಪ್ರವಾಸಿಗರನ್ನು ಕೂರಿಸಿಕೊಂಡು ಕರೆದೊಯ್ದಿದ್ದಾರೆ. ಹೀಗಾಗಿ ಭಾರ ಹೆಚ್ಚಾದ ಪರಿಣಾಮ ರ‍್ಯಾಫ್ಟಿಂಗ್‌ ಬೋಟ್‌ ಮುಳುಗಿಯೇ ಹೋಗುತ್ತಿತ್ತು. ಕೆಲವರು ನೀರಿಗೆ ಬಿದ್ದಿದ್ದಾರೆ.

ಆದರೆ ಪ್ರವಾಸಿಗರೆಲ್ಲರೂ ಲೈಫ್ ಜಾಕೆಟ್ ಹಾಕಿದ್ದರಿಂದ ಮತ್ತು ಪ್ರವಾಸಿ ನಿರ್ವಾಹಕರು, ತಕ್ಷಣ ಆಯೋಜಕರು ಸ್ಥಳೀಯ ಸಾಹಸಿಗಳು ಇನ್ನೊಂದು ಬೋಟ್​​ನಲ್ಲಿ ತೆರಳಿ ಎಲ್ಲಾ ಪ್ರವಾಸಿಗರನ್ನು ಅಪಾಯದಿಂದ ಕಾಪಾಡಿದರು. ಹಾಗೂ ಸಮೀಪದಲ್ಲೇ ಇದ್ದ ಪ್ರವಾಸಿಗರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದರಿಂದ ಎಲ್ಲರೂ ಬಚಾವ್‌ ಆಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಕ್ಕಳು ಸೇರಿದಂತೆ ಪ್ರವಾಸಿಗರು ರಕ್ಷಣೆಗೆ ಕಿರುಚಾಡುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement