ವಿಜಯವಾಡ: ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಭಾವಿ ಪತಿಯನ್ನೇ ಹತ್ಯೆ ಮಾಡಲು ಸಂಚು ರೂಪಿಸಿರುವ ಘಟನೆ ಆಂಧ್ರ ಪ್ರದೇಶದ ಅನಕಪಲ್ಲೆ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂತ್ರಸ್ತ ರಾಮು ನಾಯ್ಡು ಹೈದರಾಬಾದ್ನ ಸಿಎಸ್ಐಆರ್ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮದುವೆ ಆರೋಪಿತ ಯುವತಿ ಜೊತೆ ಮೇ 26ರಂದು ನಿಶ್ಚಯವಾಗಿತ್ತು. ಮದುವೆ ನಿಶ್ಚಯವಾದ ನಂತರ ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿ ನಡೆಸುತ್ತಿದ್ದರು.
ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಮತ್ತು ಹೈದರಾಬಾದ್ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಮು ನಾಯ್ಡು ಇತ್ತೀಚೆಗೆ ಮದುವೆ ತಯಾರಿಗಾಗಿ ತಮ್ಮ ಊರಿಗೆ ಬಂದಿದ್ದರು. ಅವರು ತಮ್ಮ ಊರಿಗೆ ಬಂದಿರುವುದನ್ನು ತಿಳಿದ ಪುಷ್ಪಾ ಅವರು ಖಾಸಗಿಯಾಗಿ ಮಾತನಾಡಲು ಕರೆದರು. ಒಂದು ಸರ್ಪ್ರೈಸ್ ಗಿಫ್ಟ್ ಕೊಡುವುದಿದೆ ಎಂದು ಹೇಳಿ ತಮ್ಮೂರಿಗೆ ಬರುವಂತೆ ಅಹ್ವಾನಿಸಿದ್ದಳು.
ಅದರಂತೆ ರಾಮ ನಾಯ್ಡು ಭಾವಿ ಪತ್ನಿಯ ಊರಿಗೆ ಭೇಟಿ ನೀಡಿದ್ದರು. ಇಬ್ಬರು ಬೆಟ್ಟದ ಮೇಲಿರುವ ಒಂದು ಸಣ್ಣ ದೇವಸ್ಥಾನ ಬಳಿ ಹೋಗಿದ್ದು, ಈ ವೇಳೆ ಯುವತಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ, ಕಣ್ಣು ಮುಚ್ಚಬೇಕು ಎಂದು ರಾಮ ನಾಯ್ಡುಗೆ ಹೇಳಿದ್ದಾರೆ. ಆತ ಕಣ್ಣು ಮುಚ್ಚಿದ ಬೆನ್ನಲ್ಲೇ ಯುವತಿ ಆತನ ಗಂಟಲಿಗೆ ಚಾಕುವಿನಿಂದ ಇರಿದಿದ್ದಾಳೆ.
ರಾಮು ನಾಯ್ಡು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕ್ಷಣ, ಮರುಮಾತಿಲ್ಲದೆ ಪುಷ್ಪ ಚಾಕು ತೆಗೆದುಕೊಂಡು ತನ್ನ ಭಾವಿ ಪತಿಯ ಕತ್ತು ಕೊಯ್ದು, “ನನಗೆ ನಿನ್ನನ್ನು ಮದುವೆಯಾಗಲು ಆಸಕ್ತಿ ಇಲ್ಲ” ಎಂದಳು.
ನಂತರ, ದಾರಿಹೋಕರ ಸಹಾಯದಿಂದ ಪುಷ್ಪಾ ತನ್ನ ಸ್ಕೂಟಿಯಲ್ಲಿ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದಳು. ಇಬ್ಬರೂ ಬೆಟ್ಟದಿಂದ ಬಿದ್ದು ರಾಮು ಗಂಭೀರವಾಗಿ ಗಾಯಗೊಂಡಿರುವುದಾಗಿ ಸಂಬಂಧಿಕರಿಗೆ ತಿಳಿಸಿದ್ದಾಳೆ. ರಾಮು ನಾಯ್ಡು ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ವಿಚಾರಣೆ ವೇಳೆ ಪುಷ್ಪಾ, ಆಕೆಯ ಒಪ್ಪಿಗೆಯಿಲ್ಲದೆ ರಾಮು ನಾಯ್ಡು ಜತೆ ಪೋಷಕರು ತನ್ನ ಮದುವೆ ನಿಶ್ಚಯಿಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯುವತಿಗೆ ಬೇರೆ ವ್ಯಕ್ತಿಯೊಂದಿಗೆ ಪ್ರೇಮ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ