ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕಲಬುರಗಿ ಜೆ.ಎಮ್.ಸಿ ಕೋರ್ಟ್ ವಜಾಗೊಳಿಸಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ಬಿಜೆಪಿ ಮುಖಂಡರಾದ ದಿವ್ಯಾ ಹಾಗರಗಿಯ ಪತಿ ರಾಜೇಶ್ ಹಾಗರಗಿ, ವೀರೇಶ್, ಅರುಣ, ಪ್ರವೀಣ, ಚೇತನ, ಸಾವಿತ್ರಿ, ಸುಮಾ, ಸಿದ್ದಮ್ಮ ಎಂಬವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಪರಿಶೀಲಿಸಿದ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಈ ನಡುವೆ ಇತರ ಬಂಧಿತ ಆರೋಪಿಗಳಾದ ಹಯ್ಯಾಳಿ ದೇಸಾಯಿ, ರುದ್ರಗೌಡ, ವಿಶಾಲ್, ಶರಣಬಸಪ್ಪ ಮುಂತಾದವರನ್ನು ಏ. 29ರ ವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಇನ್ನೂ ತಲೆ ಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ