ಮಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯ ಮಿದುಳು ಹದಿಮೂರು ದಿನಗಳ ಜೀವನ್ಮರಣ ಹೋರಾಟದಲ್ಲಿ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಏಪ್ರಿಲ್ 19ರಂದು ಮಂಗಳೂರಿನ ಬಳ್ಳಾಲ್ ಭಾಗ್ನಲ್ಲಿ ಮದ್ಯದ ಅಮಲಿನಲ್ಲಿ ವೇಗವಾಗಿ ಬಿಎಂಡಬ್ಲೂ ಕಾರು ಚಲಾಯಿಸಿಕೊಂಡು ಬಂದು ಡಿವೈಡರ್ ಮೇಲೆ ಕಾರು ಹಾರಿಸಿ, ಇನ್ನೊಂದು ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯ ಮೇಲೆ ಹಾಯಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಪ್ರೀತಿ ಮನೋಜ ಹದಿಮೂರು ದಿನಗಳ ಕಾಲ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ನಂತರ ವೈದ್ಯರು ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರೀತಿ ಮನೋಜ ಅವರ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಪ್ರೀತಿಯ ಅವರ ಅಂಗಾಂಗಗಳನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಮತ್ತು ಮಂಗಳೂರಿನ ಯೆನೆಪೊಯ ಮತ್ತು ಕೆಎಂಸಿ ಆಸ್ಪತ್ರೆಗಳಿಗೆ ಕಸಿ ಮಾಡಲು ಸ್ಥಳಾಂತರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಪ್ರೀತಿ ಅವರ ಕುಟುಂಬದವರು, ಸಂಬಂಧಿಕರು ಮತ್ತು ಹಿತೈಷಿಗಳು ಅವರ ಎಲ್ಲಾ ಅಂಗಗಳನ್ನು ದಾನ ಮಾಡುವ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರೀತಿ ಅವರ ಪತಿ ಮನೋಜ ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ