ಬೆಂಗಳೂರು: ಯುವತಿಯೊಬ್ಬಳ ಮೇಲೆ ಪಾಗಲ್ ಪ್ರೇಮಿಯೊಬ್ಬ ಆ್ಯಸಿಡ್ ಎರಚಿ ಪರಾರಿಯಾದ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
23 ವರ್ಷದ ಯುವತಿ ಕೆಲಸಕ್ಕೆ ಹೋಗಲು ಬಸ್ಗೆ ನಿಂತಿದ್ದಾಗ ಪಾಗಲ್ ಪ್ರೇಮಿ ನಾಗೇಶ್ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.
ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಈ ಘಟನೆ ನಡೆದಿದೆ. ಪ್ರೀತಿ ವಿಚಾರವಾಗಿ ಯುವಕನೊಬ್ಬ ಯುವತಿ ಹಿಂದೆ ಬಿದ್ದಿದ್ದ. ಅವಳು ಈತನ ಪ್ರೀತಿಗೆ ಸೊಪ್ಪು ಹಾಕಿರಲಿಲ್ಲ, ಇದೇ ವಿಚಾರವಾಗಿ ಪರಸ್ಪರ ಗಲಾಟೆಯೂ ಆಗಿತ್ತು. ಅದೇ ಕೋಪದಲ್ಲೇ ಯುವಕ, ಗುರುವಾರ ಬೆಳಿಗ್ಗೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇಂದು ಬೆಳಗ್ಗೆ ಎಂಟೂವರೆ ಸುಮಾರಿಗೆ ಕೆಲಸಕ್ಕೆಂದು ಯುವತಿಯನ್ನು ಆಕೆಯ ತಂದೆ ಬೈಕ್ನಲ್ಲಿ ಕರೆದುಕೊಂಡು ಬಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಡ್ರಾಪ್ ಮಾಡಿ ಹೋಗಿದ್ದರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ಆರೋಪಿ ನಾಗೇಶ್ ಈ ಕೃತ್ಯ ಎಸಗಿದ್ದಾನೆ. ಯುವತಿಯ ಬೆನ್ನು, ಕತ್ತಿನ ಬಳಿ ಆ್ಯಸಿಡ್ ಸೋಕಿದೆ. ಯುವತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ