ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ವಿಚಾರಣೆಯನ್ನು ಸಿಐಡಿ ತಂಡ ಇಂದೂ ಮುಂದುವರಿಸಿದೆ.
ಆದರೆ ಸಿಐಡಿ ಕೈಗೆ ಯಾವುದೇ ದಾಖಲೆ ಸಿಗದಂತೆ ಮಾಡಲು ತನ್ನ ಮೊಬೈಲ್ ಅನ್ನು ಮಹಾರಾಷ್ಟ್ರದಲ್ಲಿಯೇ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ದಿವ್ಯಾಳನ್ನು ಬಂಧಿಸಿದ್ದರು. ಈ ವೇಳೆ, ಮೊಬೈಲ್ ಬಗ್ಗೆ ವಿಚಾರಿಸಿದಾಗ ಆಕೆ ಬಾಯಿ ಬಿಟ್ಟಿರಲಿಲ್ಲ. ಇಂದು ಕಲಬುರಗಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪುಣೆಯ ಮನೆಯಲ್ಲೇ ಮೊಬೈಲ್ ಒಡೆದು ಹಾಕಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಮೊಬೈಲ್ ನಲ್ಲಿದ್ದ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ಹೇಳಿದ್ದಾಳೆ ಎಂದು ತಿಳಿದು ಬಂದಿದೆ.
ಉಳಿದ ಆರೋಪಿಗಳ ಬಳಿಯಿದ್ದ ಮೊಬೈಲ್ ಜಪ್ತಿ ಮಾಡಿರುವ ಸಿಐಡಿ, ಮೊಬೈಲ್ ನಲ್ಲಿ ಏನಾದರು ಸಾಕ್ಷಿ ಇದೆಯಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಮೊಬೈಲ್ ನಲ್ಲಿದ್ದ ಬಹುತೇಕ ಸಾಕ್ಷ್ಯಾಧಾರಗಳನ್ನು ಆರೋಪಿಗಳು ನಾಶ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿವ್ಯಾ ಸೇರಿದಂತೆ ಇತರ ಆರೋಪಿಗಳು ಪ್ರಕರಣದ ಸಾಕ್ಷಿ ನಾಶ ಮಾಡಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದಿವ್ಯಾ ಹೇಳಿಕೆ ಆಧರಿಸಿ ಮೊಬೈಲ್ ಹುಡುಕುವ ಕೆಲಸಕ್ಕೆ ಸಿಐಡಿ ಮುಂದಾಗಬಹುದು ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ