ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ ಮಾಡಿದ ಆರೋಪ: ವ್ಯಾಪಕ ಆಕ್ರೋಶ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು: ಬಾಬಾ ಬುಡನ್‌ಗಿರಿಯಲ್ಲಿರುವ ವಿವಾದಿತ ದತ್ತಪೀಠ ಪ್ರದೇಶ ಮತ್ತೆ ಸುದ್ದಿಯಾಗಿದೆ. ದತ್ತಪೀಠದ ಹೋಮ-ಹವನ ನಡೆಯುವ ಪವಿತ್ರ ಜಾಗದಲ್ಲಿ ಮಾಂಸದೂಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ್ದು, ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್‌ನಲ್ಲಿ ಮಾಂಸದೂಟ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ವಿವಾದಿತ ಗೋರಿ ಬಳಿ ಕಿಡಿಗೇಡಿಗಳು ಮಾಂಸದೂಟ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಪವಿತ್ರ ದತ್ತಪೀಠದಲ್ಲಿ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಹಾರ ನಡೆದಿರುವ ಬಗ್ಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಹೋಮ ಹವನ ನಡೆಯುವ ಸ್ಥಳದಲ್ಲಿ ಮಾಂಸದೂಟ ನಡೆಯುತ್ತಿದ್ದು, ದತ್ತಪೀಠದಲ್ಲಿ ಗೋರಿ ಪೂಜೆ ಮಾಡಿರುವ ಆರೋಪ ಇದೆ. ಇದಕ್ಕೆ ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಾಂಸ ಬೇಯಿಸುವ ಮೂಲಕ ದತ್ತಪೀಠ ಅಪವಿತ್ರ ಮಾಡಲಾಗಿದೆ ಅಂತ ಭಜರಂಗದಳದ ಪ್ರಾಂತ್ಯ ಸಂಚಾಲಕ ರಘು ಸಕಲೇಶಪುರ ಹೇಳಿದ್ದಾರೆ. ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ, ಬೇರೆ ಸಮಯದಲ್ಲಿ ಮಾಂಸದ ಹೊಗೆ ಆಗಿದೆ. ಮುಂದಿನ ದತ್ತ ಜಯಂತಿಯ ಹೋಮವನ್ನು ತಾತ್ಕಾಲಿಕ ಶೆಡ್ ನಲ್ಲಿ ಮಾಡುವುದಿಲ್ಲ, ಬದಲಾಗಿ ಗುಹೆ ಸಮೀಪದ ತುಳಸಿಕಟ್ಟೆ ಬಳಿ ಹೋಮ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಈ ಘಟನೆಯನ್ನು ಖಂಡಿಸಿರುವ ಬಜರಂಗದಳ, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ದತ್ತಪೀಠದ ಅಪವಿತ್ರಗೊಳಿಸಿರುವವರ ವಿರುದ್ಧ ಪ್ರಕರಣಕ್ಕೆ ಒತ್ತಾಯಿಸಿದ್ದಾರೆ. ಕೋರ್ಟ್‌ ಆದೇಶ ಉಲ್ಲಂಘನೆ ಆಗಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಘಟನೆ ಕುರಿತಂತೆ ಕಲಬುರಗಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಚಿಕ್ಕಮಗಳೂರು ದತ್ತ ಪೀಠದ ಘೋರಿಗಳಿಗೆ ಮಾಂಸ ನೈವೇದ್ಯ ಮಾಡಿದ್ದು ಅಕ್ಷಮ್ಯ ಅಪರಾಧ. ಇದರ ಹಿಂದೆ ಯಾರಿದ್ದಾರೋ ಕ್ರಮ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ನಿನ್ನೆ ರಾತ್ರಿಯೇ ಈ ವಿಚಾರ ನಿನ್ನ ಗಮನಕ್ಕೆ ಬಂದಿದೆ, ಈ ಬಗ್ಗೆ ಸ್ಪಷ್ಟನೆಗಾಗಿ ಜಿಲ್ಲಾಧಿಕಾರಿಗೆ ವಾಟ್ಸಪ ಸಂದೇಶ ಕಳುಹಿಸಿದ್ದೆ. 300 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ನಿಷಿದ್ಧವಾಗಿದೆ. ಆದರೂ ಹೇಗೆ ಅವಕಾಶ ಕೊಟ್ಟರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಪ್ರಾಣಿ ಬಲಿ ಮಾಡಿದವರ ವಿರುದ್ದ ಮತ್ತು ನಿರ್ಲಕ್ಷ ಮಾಡಿದ ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಹಿಂದೆ ಯಾರಿದ್ದಾರೆ ಅವರ ವಿರುದ್ಧವೂ ಸೂಕ್ತ ಕ್ರಮ ಆಗಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

ಈ ಮಧ್ಯೆ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಮಾಂಸದೂಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ್ದು, ದತ್ತಪೀಠ ಅಪವಿತ್ರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ವೀಡಿಯೋ ಒಂದರಲ್ಲಿ ಮಾತನಾಡಿದ ಮುತಾಲಿಕ್, ಮುಜರಾಯಿ ಮತ್ತು ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅದು ಪವಿತ್ರ ಸ್ಥಳ. ಅಂತಹ ಕ್ಷೇತ್ರದಲ್ಲಿ ಗಲೀಜು ಮಾಡಿದ್ದಾರೆ. ಅಲ್ಲಿ ಮಾಂಸದೂಟ ನಿಷೇಧ ಇದೆ. ಆದರೂ ಅಲ್ಲಿ ಮಾಂಸದೂಟ ಮಾಡಿದ್ದಾರೆ ಎಂದು ಆರೋಪಿಸಿದರು. ತಪ್ಪಿತಸ್ಥರ ಜೊತೆಗೆ ಮುಜರಾಯಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement