ಕೆನಡಾ ಪಾರ್ಲಿಮೆಂಟ್​ನಲ್ಲಿ ಮೊಳಗಿದ ಕಸ್ತೂರಿ ಕನ್ನಡ….! ಕನ್ನಡದಲ್ಲೇ ಭಾಷಣ ಮಾಡಿದ ಸಂಸದ ಚಂದ್ರ ಆರ್ಯ | ವೀಕ್ಷಿಸಿ

ಕರ್ನಾಟಕದಲ್ಲೇ ಬಹಳಷ್ಟು ಜನ ಕನ್ನಡ ಮಾತಾಡುವುದಕ್ಕಿಂತ ಇಂಗ್ಲೀಷ್​ನಲ್ಲೇ ಮಾತಾನಾಡುವುದಕ್ಕೆ ಹಮ್ಮೆ ಪಡುತ್ತಾರೆ ಎಂಬ ಆರೋಪಗಳಿವೆ. ಆದರೆ ದೂರದ ಕೆನಡಾದ ಸಂಸತ್ತಿನಲ್ಲಿ ಕನ್ನಡ ಮೊಳಗಿದೆ. ಕೆನಡಾದ ಪಾರ್ಲಿಮೆಂಟ್​ನಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ.
ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದ ಚಂದ್ರ ಆರ್ಯ ಅವರು ಅದಕ್ಕೆ ಅನುಮತಿ ಪಡೆದು ಕೆನಡಾ ಪಾರ್ಲಿಮೆಂಟ್​ನಲ್ಲಿ ಇದೇ ಮೊದಲ ಬಾರಿ ಕನ್ನಡ ಭಾಷೆಯನ್ನು ಮೊಳಗಿಸಿದ್ದಾರೆ. ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ ಕೆನಡಾ ಪಾರ್ಲಿಮೆಂಟ್​ನಲ್ಲಿಹೆಮ್ಮೆಯಿಂದ ಕನ್ನಡದಲ್ಲಿ ಮಾತನಾಡುವ ವಿಡಿಯೋ ಈಗ ವೈರಲ್‌ ಆಗಿದೆ.

ಚಂದ್ರ ಆರ್ಯ ಅವರ ಕನ್ನಡದ ಭಾಷಣ ಹೀಗಿದೆ…
ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ ರಾಜ್‌ಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ.’
ಚಂದ್ರ ಆರ್ಯ ಅವರ ಮಾತು ಮುಕ್ತಾಯವಾಗುತ್ತಿದ್ದಂತೆ ಸಂಸತ್‌ನಲ್ಲಿ ಚಪ್ಪಾಳೆಯ ಸದ್ದು ಮೊಳಗಿತು.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

ಚಂದ್ರ ಆರ್ಯ ಕರ್ನಾಟಕದ ತುಮಕೂರಿನ ಸಿರಾ ತಾಲೂಕಿನ ದ್ವಾರಾಳು ಗ್ರಾಮದವರು. ಕೆನಡಾದ ಲಿಬರಲ್‌ ರಾಜಕಾರಣಿಯಾಗಿರುವ ಅವರು, 2015ರ ಫೆಡರಲ್ ಚುನಾವಣೆಯಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ನೇಪಿಯನ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಪುನರಾಯ್ಕೆಯಾದರು ಪ್ರಸ್ತುತ ಅಂತಾರಾಷ್ಟ್ರೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದು 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 2800 ಕ್ಕೂ ಹೆಚ್ಚು ಬಾರಿ ಈ ಟ್ವೀಟ್ ರೀಟ್ವೀಟ್ ಆಗಿದೆ.

ಪ್ರಮುಖ ಸುದ್ದಿ :-   ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement