ಕಾಶ್ಮೀರದಲ್ಲಿ ಹಿಂದೂಗಳ ಟಾರ್ಗೆಟ್‌ ಹತ್ಯೆ: ಅಜಿತ್ ಅಜಿತ ದೋವಲ್ ಜೊತೆ ಅಮಿತ್ ಶಾ ಉನ್ನತ ಮಟ್ಟದ ಸಭೆ

ನವದೆಹಲಿ: ಕಾಶ್ಮೀರದಲ್ಲಿ ಹಿಂದೂಗಳನ್ನ ಗುರಿಯಾಗಿಸಿಕೊಂಡು ನಡೆಯುತ್ತಿರುವ ಹತ್ಯೆಗಳ ಸರಣಿ ಮುಂದುವರೆದಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಚರ್ಚಿಸಿದರು. ಪ್ರಧಾನಿ ಕಾರ್ಯಾಲಯದ ಕೇಂದ್ರದ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂರು ದಿನಗಳಲ್ಲಿ ಕಣಿವೆಯಲ್ಲಿ ಹಿಂದೂಗಳ ಮೇಲಿನ ಎರಡನೇ ಉದ್ದೇಶಿತ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕರು ಗುರುವಾರ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ತುರ್ತು ಸಭೆ ನಡೆದಿದೆ.
ಇಲಾಖಾಹಿ ದೇಹತಿ ಬ್ಯಾಂಕ್‌ನ ಅರೆಹ್ ಶಾಖೆಗೆ ಭಯೋತ್ಪಾದಕ ನುಗ್ಗಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದ. ಸಿಸಿಕ್ಯಾಮೆರಾ ದೃಶ್ಯಾವಳಿಯಲ್ಲಿ ಹಂತಕನು ಶಾಖೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ ಪರಾರಿಯಾಗುವುದನ್ನು ತೋರಿಸುತ್ತದೆ. ವಿಜಯ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು. ಎರಡು ದಿನಗಳ ಹಿಂದೆ ಜಮ್ಮುವಿನ ಹಿಂದೂ ಶಿಕ್ಷಕಿ ರಜನಿ ಬಾಲಾ ಅವರನ್ನು ಕುಲ್ಗಾಮ್‌ನಲ್ಲಿ ಶಾಲೆಯ ಹೊರಗೆ ಭಯೋತ್ಪಾದಕರು ಕೊಂದಿದ್ದರು.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

ಫಾರೂಕ್ ಅಹ್ಮದ್ ಶೇಖ್ ಎಂಬ ನಾಗರಿಕ ನಿನ್ನೆ ಸಂಜೆ ತನ್ನ ಮನೆಯೊಳಗೆ ಉದ್ದೇಶಿತ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದಾನೆ. ಮತ್ತೊಂದು ಘಟನೆಯಲ್ಲಿ ಇಂದು ಮುಂಜಾನೆ ವಾಹನದಲ್ಲಿ ಸ್ಫೋಟ ಸಂಭವಿಸಿ ಮೂವರು ಯೋಧರು ಗಾಯಗೊಂಡಿದ್ದಾರೆ. ಯೋಧರಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿವೆ.
ಸೇನೆಯ ಪ್ರಕಾರ, ಮೂವರು ಸೈನಿಕರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಾಗಿ ಖಾಸಗಿ ವಾಹನವನ್ನು ತೆಗೆದುಕೊಂಡು ಹೋಗಿದ್ದರು.
ತಮ್ಮನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕಾಶ್ಮೀರಿ ಪಂಡಿತರು ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ಹೊಸ ದಾಳಿ ನಡೆದಿದೆ. ಕಳೆದ ತಿಂಗಳು ಬುದ್ಗಾಮ್‌ನ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಅವರನ್ನು ಗುಂಡಿಕ್ಕಿ ಕೊಂದ ನಂತರ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement