ಬೆಂಗಳೂರು: ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದ ಉದಯ ಹುತ್ತಿನಗದ್ದೆ (61) ಅವರು ರಾಜಾಜಿನಗರದ ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ನಿಧನರಾದರು.
ಅವರು ಪತ್ನಿ, ನಟಿ ಲಲಿತಾಂಜಲಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಚಿಕ್ಕಮಗಳೂರು ಸಮೀಪದ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ ವೃತ್ತಿಪರ ಛಾಯಾಗ್ರಾಹಕರಾಗಿದ್ದರು.1980ರ ದಶಕದ ಕೊನೆಯಲ್ಲಿ ಆರಂಭ, ಕ್ರಮ, ಅಗ್ನಿ ಪರ್ವ, ಶುಭ ಮಿಲನ, ಜಯಭೇರಿ, ಉಂಡೂ ಹೋದ ಕೊಂಡೂ ಹೋದ’, ‘ಶಿವಯೋಗಿ ಅಕ್ಕಮಹಾದೇವಿ’, ‘ಅಮೃತಬಿಂದು’, ‘ಉದ್ಭವ’ ದೇವತಾ ಮನುಷ್ಯ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದರು.
ಖ್ಯಾತ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಅಂಬರೀಷ ಮುಂತಾದವರ ಜೊತೆಗೆ ಉದಯ ತೆರೆ ಹಂಚಿಕೊಂಡಿದ್ದರು. ಆರಂಭ ಚಿತ್ರದ ಮೂಲಕ ನಿರ್ಮಾಪಕರಾಗಿದ್ದರು. ಬೆಂಗಳೂರಿನ ನವರಂಗ್ ವೃತ್ತದ ಬಳಿ ಛಾಯಾಗ್ರಹಣ ಸ್ಟುಡಿಯೋ ಹೊಂದಿದ್ದ ಉದಯ ಹುತ್ತಿನಗದ್ದೆ, ಆನಂದರಾವ್ ವೃತ್ತದ ಬಳಿ ಉದಯ ಕಲರ್ಲ್ಯಾಬ್ ಸಹ ನಡೆಸುತ್ತಿದ್ದರು. ತಮ್ಮ ತವರು ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದರು ಮತ್ತು ಅದೇ ಉದ್ಯಮದಲ್ಲಿ ಹಾಗೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.
ಇತ್ತೀಚೆಗೆ ಅವರು ನರಸಂಬಂಧಿ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ