ಮಂಡ್ಯ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ದೂರು ದಾಖಲಾಗಿದ್ದ ಕಾರಣ ಕನ್ನಡದ ಹಿರಿಯ ನಟ ಜೈ ಜಗದೀಶ್ ಅವರು ಇಂದು, ಭಾನುವಾರ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥವಾಗಿದ್ದು, ಘಟನೆ ಸಂಬಂಧ ಜೈ ಜಗದೀಶ್ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿರುವ ಜೈ ಜಗದೀಶ್, ಕಳೆದ ಭಾನುವಾರ ನನ್ನ ಮತ್ತು ಚಂದ್ರು ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ನಾವು ಠಾಣೆಯಲ್ಲಿ ಕೂತು ಬಗೆಹರಿಸಿಕೊಂಡಿದ್ದೇವೆ ಮತ್ತು ರಾಜಿಯಾಗಿದ್ದೇವೆ. ನಾವಿಬ್ಬರು ಈಗ ಸ್ನೇಹಿತರು. ಯಾವುದೇ ಗಲಾಟೆಯಾಗಿರಲಿಲ್ಲ, ಸಣ್ಣ ಭಿನ್ನಾಭಿಪ್ರಾಯ ಆಗಿತ್ತಷ್ಟೇ ಎಂದು ಹೇಳಿದ್ದಾರೆ.
ಜೂನ್ 5ರಂದು ಈ ಘಟನೆ ನಡೆದಿತ್ತು. ಯುವಕ ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಜೈಗದೀಶ್ ಅವರು ಕಾರಿನಿಂದ ಬರುತ್ತಿದ್ದರು. ಪ್ರಯಾಣ ವೇಳೆ ಜೈ ಜಗದೀಶ್ ಕಾರಿನ ಮೇಲೆ ಬಾಟೆಲ್ ಬಿದ್ದಿತ್ತು. ಬಸ್ನಲ್ಲಿದ್ದವರೇ ಬಾಟಲ್ ಎಸೆದಿದ್ದಾರೆ ಅಂದುಕೊಂಡಿದ್ದರು. ಇದೇ ಸಮಯಕ್ಕೆ ಯುವಕ ಬಸ್ನಿಂದ ಕೆಳಗಿಳಿದಾಗ ಆತನೇ ಬಾಟೆಲ್ ಎಸೆದಿರಬೇಕೆಂದು ಭಾವಿಸಿ, ಬಸ್ಸಿನಿಂದ ಯಾಕೆ ಬಾಟಲಿ ಎಸೆಯುತ್ತಿಯಾ ಎಂದು ಪ್ರಶ್ನಿಸಿದ್ದರು. ಇದಾದ ನಂತರ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ. ನಂತರ ತಮ್ಮನ್ನು ಕೆಟ್ಟ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಬೆಳ್ಳೂರು ಠಾಣೆಯಲ್ಲಿ ನಟ ಜೈಜಗದೀಶ ಅವರ ಮೇಲೆ ದೂರು ದಾಖಲಿಸಲಾಗಿತ್ತು. ಈ ಸಂಬಂಧ ಇಂದು ಠಾಣೆಗೆ ಹಾಜರಾಗಿ ನಟ ಜೈಜಗದೀಶ ಹೇಳಿಕೆ ನೀಡಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ