ಹಾಡಹಗಲೇ ಶಹಾಬಾದ್‌ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಭೀಕರ ಹತ್ಯೆ

ಕಲಬುರಗಿ: ಜಿಲ್ಲೆಯ ಶಹಾಬಾದ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ, ಶಹಾಬಾದ್ ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ (42) ಎಂಬವರನ್ನು ಸೋಮವಾರ ಹಾಡಹಗಲೇ ತಲ್ವಾರ್‌ನಿಂದ ಇರಿದು ಹತ್ಯೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕಾರಣ ತಿಳಿದು ಬಂದಿಲ್ಲ. ಚಿತ್ತಾಪುರ ತಾಲೂಕಿನ ಶಹಾಬಾದ್ ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದ ಗಿರೀಶ ಅವರನ್ನು ದುಷ್ಕರ್ಮಿಗಳು ತಲ್ವಾರ್‌ನಿಂದ ಹತ್ತಾರು ಕಡೆ ಮನಸೋ ಇಚ್ಛೆ ಇರಿದು ಪರಾರಿಯಾಗಿದ್ದಾರೆ. ಘಟನೆಗೆ ಬಳಸಿದ ಎರಡು ತಲ್ವಾರ್‌ಗಳ ಪೈಕಿ ಒಂದು ಹೊಟ್ಟೆಯಲ್ಲೇ ಸಿಲುಕಿಕೊಂಡಿತ್ತು. ತಕ್ಷಣ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿತ್ತು.
ಕಾಂಗ್ರೆಸ್ ಪಕ್ಷದವರಾಗಿರುವ ಗಿರೀಶ ಕಂಬಾನೂರ ಪತ್ನಿ ಅಂಜಲಿ ಕಂಬಾನೂರ ಅವರು ಈಗ ಶಹಾಬಾದ್ ನಗರಸಭೆ ಅಧ್ಯಕ್ಷರಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರ ಅಣ್ಣ ಸತೀಶ ಕಂಬಾನೂರ ಅವರನ್ನೂ ಹತ್ಯೆ ಮಾಡಲಾಗಿತ್ತು.

 

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement