ಶಿರಸಿ: ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಷಾಢ ಪೂರ್ಣಿಮೆ ಬುಧವಾರ (ಜುಲೈ 13) ಸ್ವರ್ಣವಲ್ಲಿಯಲ್ಲಿ 32ನೇ ಚಾತುರ್ಮಾಸ್ಯ ವ್ರತವನ್ನು ಸಂಕಲ್ಪಗೈದರು.
ಶ್ರೀಮಠದಲ್ಲಿ ವಿರಾಜಮಾನವಾದ ಶ್ರೀ ವೇದವ್ಯಾಸರ ಅಧಿಷ್ಠಾನಕ್ಕೆ ಶ್ರೀಗಳವರು ಮಹಾಪೂಜೆ ನೆರವೇರಿಸಿದರು. ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿ ಶ್ರೀದೇವರ ವಿಶೇಷ ಪೂಜೆ ನಡೆಸಿದರು.
ಸಮಸ್ತ ಶಿಷ್ಯ-ಭಕ್ತರ ಪರವಾಗಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ದಂಪತಿ ಶ್ರೀಗಳವರ ಪಾದಪೂಜೆ ನೆರವೇರಿಸಿದರು. ಬಳಿಕ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು.ಜುಲೈ 9 ರಿಂದಲೇ ಚಾತುರ್ಮಾಸ್ಯದ ಚತುರ್ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ ಮಹಾಭಾರತ ಪಾರಾಯಣ ಆರಂಭವಾಗಿದ್ದು ಅದರ ಮಂಗಲೋತ್ಸವ ಕೂಡ ನಡೆಯಿತು.
ಚಾತುರ್ಮಾಸ್ಯವು ಜುಲೈ 13ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದ್ದು ಆ ದಿನಗಳಲ್ಲಿ ಪ್ರತಿದಿನ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ಮಹಾಭಾರತ ಪುರಾಣ ಪ್ರವಚನ ಸಂಯೋಜಿಸಲಾಗಿದೆ. ದಿನವೂ ಶಿಷ್ಯ-ಭಕ್ತರಿಂದ ಶ್ರೀ ಶ್ರೀಗಳವರ ಭಿಕ್ಷೆ-ಪಾದಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಗಾಯತ್ರಿ ಜಪ ಮುಂತಾದ ದಾರ್ಮಿಕ ಅನುಷ್ಠಾನಗಳು ನಡೆಯಲಿವೆ.
ಸ್ವರ್ಣವಲ್ಲೀ ಶ್ರಿಗಳ ಜೊತೆ ತುರವೇಕೆರೆ ಶ್ರೀ ಪ್ರಣವಾನಂದತೀರ್ಥರೂ ಚಾತುರ್ಮಾಸ್ಯ ವ್ರತ ಸಂಕಲ್ಪಗೈದರು.
ನಿಮ್ಮ ಕಾಮೆಂಟ್ ಬರೆಯಿರಿ