ತುಮಕೂರು: ಮಳೆಯಿಂದಾಗಿ ರೈಲ್ವೆ ಅಂಡರ್ ಪಾಸ್ನಲ್ಲಿ ನಿಂತಿದ್ದ ನೀರಿನ ಫೋಟೊ ತೆಗೆಯುವ ಆತುರದಲ್ಲಿ ಜಾರಿಬಿದ್ದು ಆಟೊ ಚಾಲಕರೊಬ್ಬರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ನಗರದ ಹೆಗಡೆ ಕಾಲೊನಿ ರೈಲ್ವೆ ಅಂಡರ್ ಪಾಸ್ ಸಮೀಪ ಸಂಭವಿಸಿದೆ.
ಶಾಂತಿನಗರದ ಆಟೋ ಚಾಲಕ ಅಮ್ಜದ್ ಖಾನ್ (44) ನೀರಿನಲ್ಲಿ ಕೊಚ್ಚಿಕೊಂಡು ಹೋದವರು ಎಂದು ಹೇಳಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ನಗರದ ಗುಬ್ಬಿಗೇಟ್ ಕಡೆಗೆ ತೆರಳುತ್ತಿದ್ದ ಅಮ್ಜದ್ ರೈಲ್ವೆ ಅಂಡರ್ ಪಾಸ್ ಸಮೀಪ ಆಟೋ ನಿಲ್ಲಿಸಿದ್ದಾರೆ. ಅದೇ ವೇಳೆ ಸುರಿದ ಜೋರು ಮಳೆಗೆ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದೆ. ನೀರು ನಿಂತಿರುವ ಫೋಟೊ ತೆಗೆಯುವ ಸಮಯದಲ್ಲಿ ಮೊಬೈಲ್ ಜಾರಿ ಬಿದ್ದಿದ್ದು, ಅದನ್ನು ತೆಗೆದುಕೊಳ್ಳಲು ನೀರಿಗೆ ಇಳಿದಿದ್ದಾರೆ. ಆಗ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಂಡರ್ ಪಾಸ್ನ ಒಂದು ಭಾಗದಲ್ಲಿ ನೀರು ಹೋಗಲು ದೊಡ್ಡ ಕೊಳವೆ ಇದ್ದು, ಅದರ ಮೂಲಕ ಸಾಕಷ್ಟು ದೂರ ಕೊಚ್ಚಿಕೊಂಡು ಹೋಗಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಅಂದಾಜಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ