ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಉಡುಪಿ ಪೊಲೀಸರು ಜನಪತ್ರಿನಿಧಿಗಳ ನ್ಯಾಯಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.
ಈ ಬಗ್ಗೆ ಸಂತೋಷ ಪಾಟೀಲ ಅವರ ಪತ್ನಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ನನ್ನ ಗಂಡ ಸಂತೋಷ ಪಾಟೀಲ ಸಾವಿಗೆ ನ್ಯಾಯ ಸಿಕ್ಕಿಲ್ಲ. ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ. ಪೊಲೀಸರು ತನೀಕೆ ಮಾಡಿ ನ್ಯಾಯ ಕೊಡಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಿರುವ ಅವರು, ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದ್ದಾರೆ. ಹೀಗಾಗಿಯೇ ನಾನು ಆತಂಕ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ನನಗೆ ಯಾವ ಆತಂಕವಿತ್ತೋ ಅದೇ ಆಗಿದೆ ಎಂದು ಹೇಳಿದರು.
ನನ್ನ ಗಂಡನ ಮೊಬೈಲ್ನಲ್ಲಿ ಸಾಕ್ಷಿಗಳು ಇದ್ದವು. ಈವರೆಗೂ ನನ್ನ ಗಂಡನ ಮೊಬೈಲ್ ನಮಗೆ ಕೊಟ್ಟಿಲ್ಲ. ನನ್ನ ಗಂಡನ ಸಹೋದರ ತನಿಖಾಧಿಕಾರಿ ಹಾಗೂ ಎಸ್ಪಿಗೆ ಫೋನ್ ಮಾಡಿದರೆ ಸ್ವೀಕರಿಸಿಲ್ಲ. ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಇದನ್ನೆಲ್ಲ ತಿಳಿಸಿದ್ದೇನೆ ಎಂದರು.
15 ದಿನಗಳಲ್ಲಿ ನಾನು ಪ್ರಕರಣದಿಂದ ಹೊರ ಬರುತ್ತೇನೆ ಎಂದು ಈಶ್ವರಪ್ಪ ಹೇಳಿದ್ದರು. ಈಗ ಬಿ ರಿಪೋರ್ಟ್ ಹಾಕಿದ್ದು ಅದು ನಿಜವಾಗುವಂತೆ ಮಾಡಿತು ಈ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಆಗುತ್ತೇವೆ. ಸಂತೋಷ ಪಾಟೀಲ್ ಸಾವಿನ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ್ದರು. ಆದರೆ ಯಾವುದೇ ಆಗಿಲ್ಲ. ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ