ಬೆಂಗಳೂರು: ಇಟ್ಟಿಗೆ ತುಂಬಿದ್ದ ವಾಹನವನ್ನು ಹಿಂದಕ್ಕೆ ತೆಗೆಯುವಾಗ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಹರಿದು ಕಂದಮ್ಮ ಸಾವಿಗೀಡಾದ ಘಟನೆ ಬೆಂಗಳೂರು ಹೊರವಲಯ ಕಾಮನಹಳ್ಳಿ ಸಮೀಪದ ಗೋಣಿಘಟ್ಟಪುರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಮನಿಶಾ ದೇವಿ ಮೃತ ಮಗು ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಬಾಲಕೃಷ್ಣ ಅವರೇ ವಾಹನವನ್ನು ಹಿಂದಕ್ಕೆ ಚಲಾಯಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಗೋಣಿಘಟ್ಟಪುರ ಗ್ರಾಮದಲ್ಲಿರುವ ದಿಲೀಪ್ ಅವರಿಗೆ ಸೇರಿದ ಹಾಲೋಬ್ಲಾಕ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಅಲ್ಲಿಯೇ ವಾಸವಾಗಿದ್ದ. ಬೆಳಗ್ಗೆ ಮನೆಯ ಬಳಿ ಮನಿಶಾ ದೇವಿ ಆಟವಾಡುತ್ತಿರುವುದನ್ನು ಗಮನಿಸದೆ ತಂದೆ ಬಾಲಕೃಷ್ಣ ಗಾಡಿಯನ್ನು ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ವಾಹನ ಮಗುವಿನ ಮೇಲೆ ಹರಿದಿದೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಬೆಳ್ಳಂದೂರಿನ ಮಣಿಪಾಲ್ ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಸರ್ಜಾಪುರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ದೂರು ದಾಖಲಿಸಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ