ತುಮಕೂರು: ತಮ್ಮ ಕುಟುಂಬದ ಸದಸ್ಯನಾಗಿದ್ದ ಗಿಳಿಯೊಂದು ಜುಲೈ 16ರಂದು ನಾಪತ್ತೆಯಾದ ನಂತರ ಗಿಳಿಗಾಗಿ ಸಾಕಷ್ಟು ಹುಡುಕಾಡಿದ ಕುಟುಂಬ ನಗರದಲ್ಲಿ ಅಲ್ಲಲ್ಲಿ ಪೋಸ್ಟರ್ಗಳನ್ನು ಹಾಕಿ ಗಿಳಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿತ್ತು. ಈಗ ಆ ಗಿಳಿ ಸಿಕ್ಕಿದ್ದು ಗಿಣಿ ಸಿಕ್ಕ ಖುಷಿಯಲ್ಲಿ ಹುಡುಕಿ ಕೊಟ್ಟವರಿಗೆ ಕುಟುಂಬವು 85 ಸಾವಿರ ರೂ.ಗಳ ಬಹುಮಾನ ಕೊಟ್ಟಿದೆ.
ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಅವರ ಕುಟುಂಬ ತಮ್ಮ ಪ್ರೀತಿಯ ಗಿಣಿ ಕಳೆದುಕೊಂಡ ದುಃಖದಲ್ಲಿತ್ತು. ಅಲ್ಲದೆ, ಗಿಣಿ ಪತ್ತೆ ಮಾಡಿಕೊಟ್ಟವರಿಗೆ ಆರಂಭದಲ್ಲಿ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಇದಾದ ಬಳಿಕ ಮತ್ತೆ 35 ಸಾವಿರ ರೂ.ಗಳನ್ನು ಏರಿಸಿ ಒಟ್ಟು 85 ಸಾವಿರ ರೂ.ಗಳ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿತ್ತು. ಈಗ ಆ ಗಿಣಿ ಕುಟುಂಬವನ್ನು ಮರಳಿ ಸೇರಿದೆ.
ಆಫ್ರಿಕನ್ ಗ್ರೇ ತಳಿಯ ಎರಡು ಗಿಣಿಗಳನ್ನು ಎರಡೂವರೆ ವರ್ಷದಿಂದ ಮನೆಯವರು ಸಾಕಿದ್ದರು. ಅದರ ಜನ್ಮದಿನವನ್ನೂ ಆಚರಿಸಲಾಗುತ್ತಿತ್ತು. ಅದರಲ್ಲಿ ರುಸ್ತುಮಾ ಎಂಬ ಗಿಣಿ ಜುಲೈ 16ರಂದು ಮನೆಯಿಂದ ನಾಪತ್ತೆಯಾಗಿತ್ತು. ಪ್ರೀತಿಯ ಗಿಣಿ ಕಾಣೆಯಾಗಿರುವುದಕ್ಕೆ ಅರ್ಜುನ್ ಕುಟುಂಬ ಕಣ್ಣೀರಿಡುತ್ತಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಗಿಣಿ ಎಲ್ಲಿಯೂ ಪತ್ತೆಯಾಗಲಿಲ್ಲ. ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ತುಮಕೂರು ನಗರದ ಹಲವೆಡೆ ಅರ್ಜುನ್ ಕುಟುಂಬದ ಪೋಸ್ಟರ್ ಹಾಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಗಿಣಿ ಕಾಣೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಆದರೂ ಸಿಕ್ಕಿರಲಿಲ್ಲ.
ಕೆಲವು ದಿನಗಳ ಹಿಂದೆ 50 ಸಾವಿರ ಇದ್ದ ಬಹುಮಾನ ಮೊತ್ತವನ್ನು ಅರ್ಜುನ್ ಕುಟುಂಬ 85 ಸಾವಿರಕ್ಕೆ ಏರಿಸಿತ್ತು. ಈಗ ಅವರ ಪ್ರಯತ್ನಕ್ಕೆ ಫಲ ದೊರೆತಿದ್ದು ಕಾಣೆಯಾಗಿದ್ದ ರುಸ್ತುಮಾ ಮರಳಿ ಮನೆಗೆ ಬಂದಿದೆ. ಸಿದ್ಧಗಂಗಾ ಮಠ ಸಮೀಪದ ಬಂಡೆ ಪಾಳ್ಯದಲ್ಲಿ ಈ ಗಿಳಿ ಪತ್ತೆಯಾಗಿದೆ. ಶ್ರೀನಿವಾಸ ಎಂಬವರ ಮನೆಯ ಟೆರೇಸ್ ಮೇಲೆ ಗಿಳಿ ಕೂತಿತ್ತು. ಇದನ್ನು ಗಮನಿಸಿದ ಮನೆ ಯಜಮಾನ ಗಿಳಿಯನ್ನು ಅದರ ಮಾಲೀಕರ ಕೈಗೆ ಒಪ್ಪಿಸಿದ್ದಾರೆ. ಗಿಳಿ ಸಿಕ್ಕ ಖುಷಿಯಲ್ಲಿ 85 ಸಾವಿರ ಬಹುಮಾನ ಕೊಟ್ಟು ಅರ್ಜುನ್ ದಂಪತಿ ಸಂಭ್ರಮಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಒಂದಾಗಿದ್ದ ಗಿಳಿ ಮತ್ತೆ ಮನೆಗೆ ಬಂದಿದ್ದಕ್ಕೆ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ