ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಶನಿವಾರ ರಾತ್ರಿ ಲಾರಿ ಹಾಗೂ ಸ್ಕಾರ್ಪಿಯೋ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ 10:30ರ ಸುಮಾರಿಗೆ ಲಾರಿಯೊಂದು ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೊ ವಾಹನದಲ್ಲಿ ಒಟ್ಟು ಒಂಬತ್ತು ಜನರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಕೊಪ್ಪಳದಲ್ಲಿ ನಡೆದ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವ ಗ್ರಾಮ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ. ಐದು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ಬಿನ್ನಾಳ ಗ್ರಾಮದ ದೇವಪ್ಪ (60), ಗಿರಿಜಮ್ಮ (55), ಪಾರವ್ವ ಭೀಮಪ್ಪ (25), ತಿಮ್ಮಾಪುರ ಗ್ರಾಮದ ಶಾಂತಮ್ಮ (35) ಹಾಗೂ ಹರ್ಲಾಪುರ ಗ್ರಾಮದ ಕಸ್ತೂರಿ (25) ಎಂದು ಗುರುತಿಸಲಾಗಿದೆ. ಪಲ್ಲವಿ, ಮಕ್ಕಳಾದ ಪುಟ್ಟರಾಜು , ಭೂಮಿಕಾ ಚಾಲಕ ಹರ್ಷವರ್ಧನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಲಕ ಪುಟ್ಟರಾಜು ತಲೆಗೆ ಗಂಭೀ ಗಾಯಗಳಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ವಾಹನದಲ್ಲಿ ಸಿಲುಕಿದ್ದ ಐದು ಜನರ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಮಾಡಿದರು.ಬಳಿಕ ಕುಕನೂರು ತಾಲ್ಲೂಕು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ