ಉಡುಪಿ: ಆಗುಂಬೆ ಘಾಟ್ ಮೂಲಕ ಲಘು ವಾಹನ ಹಾಗೂ ಬಸ್ಸುಗಳ ಸಂಚಾರಕ್ಕೆ ಮಾತ್ರ ಅನುಮತಿ ಇದ್ದು, ಇದನ್ನು ಆಗಸ್ಟ್ 31ರವರೆಗೆ ಮುಂದುವರೆಸಲಾಗಿದೆ. ಅಲ್ಲಿಯ ತನಕ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯ 11ನೇ ತಿರುವಿನಲ್ಲಿ ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಭಾರೀ ವಾಹನ ಸಂಚಾರವನ್ನು ಜು.30ರ ವರೆಗೆ ಸ್ಥಗಿತಗೊಳಿಸಿ ಲಘು ವಾಹನ ಸಂಚಾರಕ್ಕೆ ಮಾತ್ರ ಮಾಡಲಾಗಿತ್ತು. ಭಾರೀ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿತ್ತು.
ಆದರೆ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಲು ಕೋರಿಕೆಗಳು ಬರುತ್ತಿರುವುದರಿಂದ ಹಾಗೂ ಈಗಾಗಲೇ ಭೂಕುಸಿತದಿಂದಾಗಿ ರಸ್ತೆ ಪಕ್ಕ ಕುಸಿದಿದ್ದರಿಂದ ಗಾರ್ಡ್ವಾಲ್ನ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ತಾತ್ಕಾಲಿಕ ದುರಸ್ತಿ ಕಾರ್ಯ ಮುಂದುವರಿದಿದೆ. ಕಾಮಗಾರಿ ಮುಗಿಯಲು ಎರಡು ವಾರಗಳು ಬೇಕಾಗಿದ್ದು, ಆಗುಂಬೆ ಘಾಟ್ನಲ್ಲಿ ಭಾರೀ ವಾಹನಗಳ ಸಂಚಾರವನ್ನು ಆ.31ರ ವರೆಗೆ ಸ್ಥಗಿತಗೊಳಿಸುವುದು ಸೂಕ್ತ ಎಂದು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರದಿ ಸಲ್ಲಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ