ಮೈಸೂರು: ಡಾ. ಪುನೀತರಾಜಕುಮಾರ್ ನೆಪಿನಲ್ಲಿ ಸಮಾಜ ಕಾರ್ಯ ಮಾಡಬೇಕೆಂಬ ಹಂಬಲದಿಂದ ಪ್ರಕಾಶ್ ರಾಜ್ ಫೌಂಡೇಷನ್ ರಾಜ್ಯದ 32 ಜಿಲ್ಲೆಗಳಲ್ಲೂ ‘ಅಪ್ಪು ಎಕ್ಸ್ಪ್ರೆಸ್’ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ. ಮೊದಲ ಸೇವಾ ಕಾರ್ಯವಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಿದೆ. ನಗರದ ಶತಮಾನ ಕಂಡ ಮಿಷನ್ ಆಸ್ಪತ್ರೆಗೆ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್ ನೀಡಿ ಪ್ರಕಾಶ್ ರಾಜ್ ನೀಡಿದರು.
ಬಹುಭಾಷಾ ನಟ, ಕನ್ನಡಿಗ ಪ್ರಕಾಶ್ ರೈ ನೇತೃತ್ವದಲ್ಲಿ ಶನಿವಾರ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್ಪ್ರೆಸ್’ ಆಂಬುಲೆನ್ಸ್ ಅನ್ನು ಸಿಸ್ಟರ್ ಸುಜಾತ ಅವರಿಗೆ ಹಸ್ತಾಂತರಿಸಿದರು. ಅತ್ಯಾಧುನಿಕ ಸೌಲಭ್ಯವುಳ್ಳ ಆಂಬುಲೆನ್ಸ್ನಲ್ಲಿ ‘ರಾಜಕುಮಾರ’ ಚಿತ್ರದಲ್ಲಿ ಅಪ್ಪು ಕಾಣಿಸಿಕೊಂಡಿರುವ ಹೆಗಲ ಮೇಲೆ ಪಾರಿವಾಳ ಕುಳಿತ ಭಾವಚಿತ್ರವನ್ನು ಅಂಟಿಸಲಾಗಿದೆ. ಇದು ಇನ್ನು ಮುಂದೆ ಜನರ ಸೇವೆಗೆ ಲಭ್ಯವಿರಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಪ್ಪು ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ನೀಡುವ ಕಾರ್ಯವನ್ನು ನಮ್ಮ ಫೌಂಡೇಶನ್ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ಪುನೀತ್ ರಾಜಕುಮಾರ್ ಅವರ ಮಾನವೀಯತೆಯ ಕೆಲಸವೇ ಸ್ಫೂರ್ತಿಯಾಗಿದೆ ಎಂದು ಪ್ರಕಾಶ ರೈ ಹೇಳಿದರು.
ಪುನೀತ್ ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲಸ ದೊಡ್ಡದು. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಉದ್ದೇಶ ನಮ್ಮದು. ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಆ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಿಗೂ ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್ ನೀಡಲು ಮುಂದಾಗಿದ್ದೇವೆ ಎಂದು ನಟ ಪ್ರಕಾಶ್ ರೈ ತಿಳಿಸಿದರು.
ಪುನೀತ್ರಾಜಕುಮಾರ ಅವರ ಜೊತೆಗೆ 8 ವರ್ಷಗಳ ಒಡನಾಟವಿದ್ದು, 2 ಸಿನೆಮಾಗಳನ್ನು ಮಾಡಿದ್ದರೂ ಅವರು ಮಾಡಿದ್ದ ಒಳ್ಳೆಯ ಕೆಲಸಗಳು ನಮಗೆ ಗೊತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಂಡಿದ್ದರು ಎಂದು ಹೇಳಿದರು.
ಮೈಸೂರಿನ ಮಿಷನ್ ಆಸ್ಪತ್ರೆಯವರು ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸ್ಥಳ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ದಾನಿಗಳ ಸಹಾಯದಿಂದ ಎರಡ್ಮೂರು ತಿಂಗಳಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಅವರು ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ