ರಾಮನಗರದಲ್ಲಿವರುಣನ ಅಬ್ಬರಕ್ಕೆ ಜನ ತತ್ತರ: ಅರ್ಧ ಮುಳುಗಿದ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರ ರಕ್ಷಣೆ, ಎರಡು ತಾಲೂಕಿನಲ್ಲಿ ಶಾಲೆಗಳಿಗೆ ರಜೆ, ತೇಲಿಹೋದ ವಾಹನಗಳು

ರಾಮನಗರ: ಜಿಲ್ಲೆಯಾದ್ಯಂತ ಕುಂಭದ್ರೋಣ ಮಳೆಗೆ ರಾಮನಗರದಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ನೀರಿನಲ್ಲಿ ಮುಳುಗುತ್ತಿದ್ದ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.
ಮಳೆಯಿಂದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ‌ ವಾಹನಗಳು ತೇಲುತ್ತಿದ್ದು, ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ರಾಮನಗರ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ಮದ್ದೂರಿನಿಂದ ಬೈ ಪಾಸ್​ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯರಂಗ ಬಸ್​ ಬಿಳಗುಂಬ ರಸ್ತೆಯ ಬಳಿ ಅಂಡರ್​ಪಾಸ್​ನಲ್ಲಿ ತುಂಬಿದ್ದ ನೀರಿನಲ್ಲಿ ಸಿಲುಕಿದ್ದು, ಅದರಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ಮಳೆ ನೀರು ಬಸ್​ನಲ್ಲಿ ಎದೆಯ ಮಟ್ಟಕ್ಕೆ ತುಂಬಿದ ಪರಿಣಾಮ ಎಲ್ಲರು ಆತಂತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಸ್ಪಂದಿಸಿದ ಸ್ಥಳೀಯ ಯುವಕರು ಬಸ್​ ನಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ ಹೊರಗೆ ಕರೆತರುವಲ್ಲಿ ಯಶಸ್ವಿ ಆಗಿದ್ದಾರೆ. ಇದರಿಂದ ಸಂಭನೀಯ ಅನಾಹುತ ತಪ್ಪಿದೆ.

ಧಾರಾಕಾರ ಮಳೆ ಹಿನ್ನೆಲೆ ಆರ್ಕೇಶ್ವರ ಕಾಲೋನಿ ಜಲಾವೃತಗೊಂಡಿದೆ. ಕಾಲೋನಿಯಲ್ಲಿರುವ ಮುಕ್ಕಾಲು ಭಾಗ ಮನೆಗಳ ಮುಳುಗಡೆಯಾಗಿದ್ದು, ಮನೆಯಲ್ಲಿದ್ದ ದಿನ ಬಳಕೆ ವಸ್ತು, ಬೈಕ್, ಕಾರು ಸಂಪೂರ್ಣ ಜಲಾವೃತಗೊಂಡಿದೆ.
ಶಾಲಾ- ಕಾಲೇಜುಗಳಿಗೆ ರಜೆ
ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಅತಿ ಹೆಚ್ಚು ಮಳೆಯಾಗಿರುವ ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಇಂದು ನಡೆಯ ಬೇಕಿದ್ದ ತರಗತಿಯನ್ನ ಶನಿವಾರ ಪೂರ್ಣ ದಿನ ನಡೆಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಬೆಂಗಳೂರು -ಮೈಸೂರು  ಹೆದ್ದಾರಿಯಲ್ಲಿ ಪರದಾಟ
ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ಕೆಲ ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ರಾಮನಗರ ಸಮೀಪದ ಸಂಗಬಸವನ ದೊಡ್ಡಿ ಬಳಿ ವಾಹನಗಳು ಮುಳುಗಡೆಯಾಗಿದ್ದು, ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತ ವಾಹನಗಳಿಂದಾಗಿ ಟ್ರಾಫಿಕ್ ಜಾಂ ಆಗಿದೆ. ದಶಪಥ ಹೆದ್ದಾರಿ ಮೇಲೆ ನಾಲ್ಕು ಅಡಿಗೂ ಅಧಿಕ ನೀರು ಹರಿಯುತ್ತಿದ್ದು, ಸರ್ವೀಸ್ ರಸ್ತೆಯಲ್ಲೂ ನೀರು ಹರಿಯುತ್ತಿದೆ.
ರೈಲು ನಿಲ್ದಾಣಕ್ಕೂ ನೀರು
ಇನ್ನೂ ರಾಮನಗರ ಮತ್ತು ಚನ್ನಪಟ್ಟಣ ರೈಲು ನಿಲ್ದಾಣದಲ್ಲಿಯೂ ನೀರು ತುಂಬಿದೆ. ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತಗೊಂಡಿದ್ದು, ರೈಲ್ವೆ ಪ್ಲಾಟ್ ಫಾಂ ತುಂಬಾ ಮಳೆ ನೀರು ತುಂಬಿದೆ. ರೈಲು ಬರಲು ಹಳಿ ಕಾಣದಂತೆ ನೀರು ತುಂಬಿದ್ದು, ರೈಲು ಸಂಚಾರಕ್ಕೂ ವರುಣ ಅಡ್ಡಿಪಡಿಸಿದೆ. ಮಳೆ ಅಬ್ಬರಕ್ಕೆ ರೈಲು ಸಂಚಾರ ಈಗ ಸ್ಥಗಿತಗೊಂಡಿದೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement