ನವದೆಹಲಿ: ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಂದಿನ ವಾರ ತಮ್ಮ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (PLC) ಅನ್ನು ಕೇಸರಿ ಪಕ್ಷದೊಂದಿಗೆ ವಿಲೀನಗೊಳಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಸೆಪ್ಟೆಂಬರ್ 19 ರಂದು ವಿಲೀನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತ ಮೂಲಗಳು ತಿಳಿಸಿದ್ದು, ದಿನಾಂಕವನ್ನು ಇನ್ನೂ ದೃಢಪಡಿಸಿಲ್ಲ ಎಂದು ಕ್ಯಾಪ್ಟನ್ನ ಹಿರಿಯ ಸಹಾಯಕರು ತಿಳಿಸಿದ್ದಾರೆ. ಸೆಪ್ಟೆಂಬರ್ 18 ರಂದು ನವದೆಹಲಿಗೆ ತೆರಳಲಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಅವರು ಬಿಜೆಪಿ ಸೇರಿದ ನಂತರ ಪ್ರಮುಖ ಜವಾಬ್ದಾರಿಯನ್ನು ಅವರಿಗೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ನಲ್ಲಿ ಪಕ್ಷದ ಹೈಕಮಾಂಡ್ನಿಂದ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಲು ಸೂಚಿಸಿದ ನಂತರ ಕಾಂಗ್ರೆಸ್ ತೊರೆದಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಿಎಲ್ಸಿ ಹೆಸರಿನಲ್ಲಿ ಹೊಸ ಪಕ್ಷವನ್ನೂ ಸ್ಥಾಪನೆ ಮಾಡಿ ಚುನಾವಣೆ ಎದುರಿಸಿದ್ದರು.
ಕಾಂಗ್ರೆಸ್ ನಂತರ ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತು. ಆದರೆ ಕೆಲವೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ ಚುನಾವಣೆಯಲ್ಲಿ ಚನ್ನಿ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದರು.
ಅಮರಿಂದರ್ ಸಿಂಗ್ ಅವರ ಪಿಎಲ್ಸಿಯು ಬಿಜೆಪಿಯೊಂದಿಗೆ (BJP) ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿತು. ಆದರೆ, ಯಶಸ್ಸು ಕಾಣಲು ವಿಫಲವಾಯಿತು. ಬಿಜೆಪಿ ಮತ್ತು ಎಸ್ಎಡಿ (ಸಂಯುಕ್ತ) ಜೊತೆ ಮೈತ್ರಿ ಮಾಡಿಕೊಂಡು ಪಿಎಲ್ಸಿ ಚುನಾವಣೆ ಎದುರಿಸಿತ್ತು.
ಅಮರಿಂದರ್ ಸಿಂಗ್ ಜೊತೆ ಆರು ಮಂದಿ ಕಾಂಗ್ರೆಸ್ ನಾಯಕರು, ಕೆಲವು ಮಾಜಿ ಶಾಸಕರು ಕೂಡ ಮಾಜಿ ಮುಖ್ಯಮಂತ್ರಿಯೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗಿದೆ. 2002 ರಿಂದ 2007 ಹಾಗೂ 2017 ರಿಂದ 2021ರವರೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು. 2021 ಸೆಪ್ಟೆಂಬರ್ನಲ್ಲಿ ಹೈಕಮಾಂಡ್ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಪಕ್ಷವನ್ನು ತೊರೆದಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ