ಕೇವಲ 41 ಗಂಟೆಗಳಲ್ಲಿ 2,700 ಕಿಮೀ. ಚಾಲನೆ ಮಾಡಿ ತೀವ್ರ ಅಸ್ವಸ್ಥ ಕಾರ್ಮಿಕನನ್ನು ಸ್ವಂತ ಊರಿಗೆ ಸುರಕ್ಷಿತವಾಗಿ ತಲುಪಿಸಿದ ಆಂಬುಲೆನ್ಸ್‌ ಚಾಲಕ..!

ಮಂಗಳೂರು: ಮೂಡುಬಿದಿರೆ ಅಡಕೆ ಗೋದಾಮಿನ ಮಾಡಿನಿಂದ ಬಿದ್ದು ಕೋಮಾದಲ್ಲಿದ್ದ ಕಾರ್ಮಿಕನನ್ನು ಆಂಬ್ಯುಲೆನ್ಸ್‌ನಲ್ಲಿ ಆಮ್ಲಜನಕದ ವ್ಯವಸ್ಥೆ ಮಾಡಿ ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಕರೆದೊಯ್ದ ಐರಾವತ ಆಂಬ್ಯುಲೆನ್ಸ್‌ನ ಚಾಲಕನ ಸಾಹಸ ಈಗ ಭಾರೀ ಪ್ರಶಂಸೆಗೆ ಕಾರಣವಾಗಿದೆ.
ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಕಾರ್ಮಿಕನೊಬ್ಬನನ್ನು ರೋಗಿಯ ಊರಾದ ಉತ್ತರ ಪ್ರದೇಶದ ಮೊರಾದಬಾದ್​​ಗೆ ಮೂಡುಬಿದಿರೆಯಿಂದ ಆಂಬುಲೆನ್ಸ್ ಮೂಲಕವೇ ಕರೆದೊಯ್ಯಲಾಯಿತು. ಆಂಬುಲೆನ್ಸ್ ಮಾಲೀಕ ಮತ್ತು ಚಾಲಕ ಅನಿಲ್ ರುಬೇನ್ ಮೆಂಡೊನ್ಸಾ (45) ಅವರು ತಮ್ಮ ಜೊತೆ ಮತ್ತೊಬ್ಬ ಚಾಲಕ ಅಶ್ವತ್ಥ ಮೂಡಬಿದ್ರೆ (26) ಅವರನ್ನು ಕರೆದುಕೊಂಡು ತೀವ್ರವಾಗಿ ಗಾಯಗೊಂಡು ಕೋಮಾದಲ್ಲಿದ್ದ ಮಹಮದ್ ಹಸನ್ ಅವರನ್ನು ಅವರ ಊರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಅದೂ ಕೇವಲ 41 ಗಂಟೆಗಳಲ್ಲಿ..!
ಉತ್ತರ ಪ್ರದೇಶದ ಕಾರ್ಮಿಕ ಮಹಾಂದಿ ಹಸ್ಸನ್ ಎಂಬವರು ಮೂಡುಬಿದಿರೆ ಮಾಸ್ತಿಕಟ್ಟೆಯಲ್ಲಿ ಅಡಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಸಂದರ್ಭ ಆಕಸ್ಮಾತ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 25 ರಿಂದ ಸಪ್ಟೆಂಬರ್ 9 ರ ವರೆಗೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಬಗ್ಗೆ ಮೊರಾದಬಾದ್‌ನಲ್ಲಿರುವ ಅವರ ಮನೆಯವರಿಗೂ ಮಾಹಿತಿ ನೀಡಲಾಗಿತ್ತು. ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವುದಾಗಿ ಮನೆಯವರು ಕೇಳಿಕೊಂಡಾಗ ಅಡಕೆ ದಾಸ್ತಾನು ಕೇಂದ್ರದ ಮಾಲೀಕರು ವಿಮಾನದ ಮೂಲಕ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ವಿಮಾನದ ಟಿಕೆಟ್ ತೆಗೆಸಿಕೊಟ್ಟರು. ಆದರೆ ವೈದ್ಯರಿಲ್ಲದೆ, ದಾದಿಯರಿಲ್ಲದೆ ರೋಗಿಯನ್ನು ಒಯ್ಯಲು ಸಾಧ್ಯವಿಲ್ಲ ಎಂದು ವಿಮಾನಯಾನ ಸಂಸ್ಥೆ ಒಯ್ಯಲು ನಿರಾಕರಿಸಿತು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

ಹೀಗಾಗಿ ಬೇರೆ ದಾರಿ ಕಾಣದೆ ಮೂಡುಬಿದಿರೆಯ ಐರಾವತ ಆಂಬ್ಯುಲೆನ್ಸ್ ಮಾಲೀಕ ಅನಿಲ್ ರೂಬನ್ ಮೆಂಡೋನ್ಸಾ ಅವರನ್ನು ಸಂಪರ್ಕಿಸಿ ಈ ಬಗ್ಗೆ ಕೇಳಿಕೊಳ್ಳಲಾಯಿತು. ವೈದ್ಯರಿಲ್ಲ, ದಾದಿಯೂ ಇಲ್ಲ, ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಅವರ ಮನೆಯವರ ಜವಾಬ್ದಾರಿ ಹಾಗೂ ರಿಸ್ಕ್‌ ಮೇಲೆಯೇ ಆಸ್ಪತ್ರೆಯವರು ಬಿಡುಗಡೆ ಪತ್ರ ನೀಡಿದರು. ಆಂಬುಲೆನ್ಸ್‌ಗೆ ಆಮ್ಲಜನಕದ ಸಿಲಿಂಡರ್‌, ಪೊಲೀಸ್ ಠಾಣೆಯಿಂದ ಪಡೆದ ಪತ್ರ ಎಲ್ಲವನ್ನೂ ಜೊತೆಗಿರಿಸಿಕೊಂಡ ಅನಿಲ್ ಮೆಂಡೋನ್ಸಾ ಅವರು ಇನ್ನೊಬ್ಬ ಚಾಲಕ ಅಶ್ವತ್ಥ ಜೊತೆ ಸೆಪ್ಟೆಂಬರ್‌ 10ರ ಸಂಜೆ ಮೂಡುಬಿದಿರೆಯಿಂದ ಹೊರಟರು.

ಡೀಸೆಲ್ ತುಂಬಿಸುವಲ್ಲಿ ಹೊರತುಪಡಿಸಿ ಎಲ್ಲಿಯೂ ವಾಹನ ನಿಲ್ಲಲಿಲ್ಲ. ಉತ್ತರ ಪ್ರದೇಶದಿಂದ ಬಂದಿದ್ದ ಹಸನ್‌ ಗೆಳೆಯರಲ್ಲಿ ಒಬ್ಬರಿಗೆ ವಾಹನ ಚಾಲನೆ ಮಾಡುವುದು ಗೊತ್ತಿದ್ದುದರಿಂದ ಮತ್ತಷ್ಟು ಅನುಕೂಲವಾಯಿತು. ಮೊರಾದಾಬಾದ್‌ನ ಆಸ್ಪತ್ರೆ ಶ್ರೇಯಾ ನ್ಯೂರೋ ಕೇಂದ್ರ ತಲುಪುವಾಗ ಸೆಪ್ಟೆಂಬರ್‌ 12ರ ಬೆಳಗ್ಗೆ 10:30 ಆಗಿತ್ತಂತೆ.
ಅನಿಲ್ ಮೆಂಡೋನ್ಸಾ ಗುರುವಾರ ಮೂಡುಬಿದಿರೆಗೆ ವಾಪಸಾಗಿದ್ದಾರೆ. ಪ್ರಯಾಣದ ಎಲ್ಲ ವೆಚ್ಚವನ್ನೂ ಹಸ್ಸನ್‌ಅವರ ಅಡಕೆ ದಾಸ್ತಾನು ಕೇಂದ್ರದ ಮಾಲೀಕರು ನೋಡಿಕೊಂಡಿದ್ದಾರೆ. ಅತ್ತ ಹಸನ್ ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ಲಭಿಸಿದೆ ಎಂದು ಅನಿಲ್ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement