ಯುವಕನಿಗೆ ಬಲವಂತದಿಂದ ಖತ್ನಾ ಮಾಡಿಸಿ ಮತಾಂತರ ಯತ್ನದ ಆರೋಪ: ಹುಬ್ಬಳ್ಳಿಯಲ್ಲಿ ಪ್ರಕರಣ ದಾಖಲು

ಹುಬ್ಬಳ್ಳಿ : ಮಂಡ್ಯದ ಯಾದವನಹಳ್ಳಿ ಗ್ರಾಮದ ಯುವಕನೊಬ್ಬನಿಗೆ ಮರ್ಮಾಂಗದ ಖತ್ನಾ ಮಾಡಿ ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ತನ್ನನ್ನು ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು 11 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದ ಅತ್ತಾವರ ರೆಹಮಾನ್‌, ಬೆಂಗಳೂರಿನ ಅಜೀಸಾಬ್‌, ನಯಾಜ್‌ ಪಾಷಾ, ನದೀಮ್‌ ಖಾನ್‌, ಅನ್ಸಾರ್‌ ಪಾಷಾ, ಸಯ್ಯದ್‌ ದಸ್ತಗಿರ, ಮಹ್ಮದ್‌ ಇಕ್ಬಾಲ್‌, ರಫಿಕ್‌, ಶಬ್ಬೀರ್‌, ಖಾಲಿದ್‌, ಶಾಕಿಲ್‌ ಮತ್ತು ಅಲ್ತಾಪ್‌ ವಿರುದ್ಧ ಪ್ರಕರಣ ದಾಖಲಾಗಿದೆ.
ಶ್ರೀಧರ ಗಂಗಾಧರ ಖಾಸಗಿ ಕಂಪನಿಯೊಂದರಲ್ಲಿನ ನೌಕರ. ಈತನಿಗೆ ಹಣಕಾಸಿನ ತೊಂದರೆ ಇತ್ತು. ಈ ವಿಷಯವನ್ನು ಆರೋಪಿ ಅತ್ತಾವರ ರೆಹಮಾನ್‌ಗೆ ತಿಳಿಸಿದ್ದಾನೆ. ಹಣಕಾಸಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಆತನನ್ನು ನಂಬಿಸಿ ಕಳೆದ ಮೇ ತಿಂಗಳಿನಲ್ಲಿ ಶ್ರೀಧರ ಅವರನ್ನು ಬೆಂಗಳೂರಿಗೆ ಕರೆದೊಯ್ದ ಆರೋಪಿಗಳು, ಅಲ್ಲಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದರು. ನಂತರ ನಂತರ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ನಂಬಿಸಿ ಖತ್ನಾ ಮಾಡಿದ್ದಾರೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೆ, ಮತಾಂತರದ ಬಗ್ಗೆ ಬಾಂಡ್ ಪೇಪರ್’ನಲ್ಲಿ ಸಹಿ‌ ಪಡೆದಿದ್ದಾರೆ. ಅಲ್ಲಿಂದ ತಿರುಪತಿಗೆ ಕರೆದೊಯ್ದು, ಮುಸ್ಲಿಂ ಧರ್ಮದ ಪ್ರಾರ್ಥನೆ ಹಾಗೂ ಇತರ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ ಎಂದು ದೂರುನಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಪ್ರತಿವರ್ಷ ಮೂವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಬೇಕೆಂದು ಆರೋಪಿಗಳು ಶ್ರೀಧರ ಅವರಿಗೆ ಬೆದರಿಕೆ ಹಾಕಿದ್ದಾರೆ. ಅವರ ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಭಯೋತ್ಪಾದಕನೆಂದು ಬಿಂಬಿಸುವುದಾಗಿ ಹೆದರಿಸಿದ್ದಾರೆ. ನಂತರ ಅವರ ಬ್ಯಾಂಕ್ ಖಾತೆಗೆ ₹35 ಸಾವಿರ ವರ್ಗಾಯಿಸಿ, ತಾವು ಹೇಳಿದಂತೆ ಕೇಳಬೇಕು ಎಂದು ತಾಕೀತು ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ಈ ನಡುವೆ ಶ್ರೀಧರ ಅವರಿಗೆ ಫೇಸ್‌ಬುಕ್‌ನಲ್ಲಿ ಹುಬ್ಬಳ್ಳಿ ಯುವತಿಯೊಬ್ಬಳು ಪರಿಚಯವಾಗಿದೆ. ಯುವತಿ ಶ್ರೀಧರನಿಗೆ ಹುಬ್ಬಳ್ಳಿಗೆ ಬರುವಂತೆ ಆಹ್ವಾನಿಸಿದ್ದಾಳೆ. ಅದರಂತೆ ಸೆಪ್ಟೆಂಬರ್‌ 18ರಂದು ಹುಬ್ಬಳ್ಳಿಗೆ ಶ್ರೀಧರ ಆಗಮಿಸಿದ್ದಾರೆ. ಸೆಪ್ಟೆಂಬರ್‌ 21ರಂದು ರಾತ್ರಿ ವೇಳೆ ಭೈರಿ ದೇವರಕೊಪ್ಪದಲ್ಲಿ ಅಡ್ಡಾಡುತ್ತಿದ್ದಾಗ ಅಪರಿಚಿತರು ಈತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಈತ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ನವನಗರ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.
ಈ ನಡುವೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನೂ ಶುರು ಮಾಡಿದ್ದಾರೆ. ಈ ಸಂಬಂಧ ಪೊಲೀಸ್‌ ತಂಡ ಬೆಂಗಳೂರಿಗೂ ತೆರಳಿದೆ ಎನ್ನಲಾಗಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement