ಪ್ರಯಾಣಿಕರೇ ಗಮನಿಸಿ.. ದಸರಾ ಹಬ್ಬಕ್ಕೆ ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ 500 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ

ಹುಬ್ಬಳ್ಳಿ: ಅಕ್ಟೋಬರ್ ತಿಂಗಳಿನ ಮೊದಲ ವಾರದಲ್ಲಿ ಗಾಂಧಿ ಜಯಂತಿ ಮತ್ತು ನವರಾತ್ರಿ/ ದಸರಾ ಹಬ್ಬಕ್ಕೆ ರಜೆಗಳು ಇದ್ದು, ಸಾರ್ವಜನಿಕರು ಹಬ್ಬ ಆಚರಿಸಲು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 500 ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಅಕ್ಟೋಬರ್‌ ತಿಂಗಳ 2ರಂದು ಭಾನುವಾರ, 4ರಂದು ಮಂಗಳವಾರ ಮತ್ತು 5ರಂದು ಬುಧವಾರ ಕ್ರಮವಾಗಿ ಗಾಂಧಿ ಜಯಂತಿ, ಮಹಾನವಮಿ/ಆಯುಧ ಪೂಜೆ, ವಿಜಯದಶಮಿ ಇರುವುದರಿಂದ ಬೆಂಗಳೂರು, ಮಂಗಳೂರು, ಹೈದರಾಬಾದ್‌, ಪಣಜಿ, ಮುಂಬಯಿ, ಪುಣೆ ಹಾಗೂ ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಭಾಗಗಳಿಂದ ಪ್ರಯಾಣಿಕರು ಹಬ್ಬಕ್ಕಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಲು ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 3ರ ವರೆಗೆ ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಹಬ್ಬ ಮುಗಿದ ನಂತರ ತಮ್ಮ ಸ್ವಂತ ಊರುಗಳಿಂದ ಬೆಂಗಳೂರು, ಮಂಗಳೂರು, ಹೈದ್ರಾಬಾದ, ಪಣಜಿ, ಮುಂಬಯಿ, ಪುಣೆ ಹಾಗೂ ರಾಜ್ಯದ/ಅಂತಾರಾಜ್ಯದ ಇನ್ನಿತರ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಅಕ್ಟೋಬರ್‌ 5ರಿಂದ ಅಕ್ಟೋಬರ್‌ 9ರ ವರೆಗೆ ಸಂಸ್ಥೆಯ ಪ್ರಮುಖ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಕುರಿತು ಪ್ರಯಾಣಿಕರು ಮುಂಗಡ ಟಿಕೇಟ್‌ಗಳನ್ನು Ksrtc mobile app ಅಥವಾ  http://www.ksrtc.in ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.
ಈ ವಿಶೇಷ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಸುರಕ್ಷಿತ ಪ್ರಯಾಣಿಕ್ಕಾಗಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement